ಆಧಾರ್ ಆದ್ಯಾದೇಶ ಪ್ರಶ್ನಿಸಿ ಮನವಿ ವಿಚಾರಣೆಗೆ ಪರಿಗಣನೆಗೆ ಸುಪ್ರೀಂ ನಿರಾಕರಣೆ
ಹೊಸದಿಲ್ಲಿ, ಎ. 5: ಕೇಂದ್ರ ಜಾರಿಗೆ ತಂದ ಆಧಾರ್ ಆಧ್ಯಾದೇಶದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಮನವಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಈ ಮನವಿಯೊಂದಿಗೆ ಮೊದಲು ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸುಪ್ರೀಂ ಕೋರ್ಟ್ ದೂರುದಾರರಿಗೆ ಸೂಚಿಸಿದೆ.
ಈ ಪ್ರಕರಣದ ಬಗ್ಗೆ ನಾವೇನೂ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಉಚ್ಚ ನ್ಯಾಯಾಲಯದ ನಿಲುವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹಾಗೂ ಎಸ್.ಎ. ನಝೀರ್ ಅವರನ್ನೊಳಗೊಂಡ ಪೀಠ ಹೇಳಿದೆ.
ಉಚ್ಚ ನ್ಯಾಯಾಲಯದ ನಿಲುವಿನ ಆಧಾರದಲ್ಲಿ ನಾವು ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಪೀಠ ಹೇಳಿದೆ.
ಇದು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯವಾದುದರಿಂದ ಸುಪ್ರೀಂ ಕೋರ್ಟ್ ಕೂಡಲೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ತಿಳಿಸಿದ್ದಾರೆ.
ಮನವಿ ಹಿಂದೆ ತೆಗೆಯಲು ಹಾಗೂ ಉಚ್ಚ ನ್ಯಾಯಾಲಯ ಸಂಪರ್ಕಿಸುವ ಸ್ವಾತಂತ್ರವನ್ನು ಪೀಠ ನೀಡಿದೆ.
ಮೊಬೈಲ್ ಸಿಮ್ ಕಾರ್ಡ್ ಪಡೆಯಲು ಹಾಗೂ ಬ್ಯಾಂಕ್ ಖಾತೆ ಆರಂಭಿಸಲು ಗುರುತಿನ ಪುರಾವೆಯಾಗಿ ಆಧಾರ್ ಅನ್ನು ಸ್ವಯಂಪ್ರೇರಿತವಾಗಿ ಬಳಸಲು ಅವಕಾಶ ನೀಡುವ ಆಧಾರ್ ಆಧ್ಯಾದೇಶಕ್ಕೆ ಮಾರ್ಚ್ 3ರಂದು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅಂಕಿತ ಹಾಕಿದ್ದರು.