ಬಾಬುಲ್ ಸುಪ್ರಿಯೊ ಸಂಯೋಜನೆಯ ಬಿಜೆಪಿ ಚುನಾವಣಾ ಹಾಡಿಗೆ ಚು. ಆಯೋಗ ನಿಷೇಧ
ಕೊಲ್ಕತ್ತಾ, ಎ.7: ಕೇಂದ್ರ ಸಚಿವ ಹಾಗೂ ಗಾಯಕ ಬಾಬುಲ್ ಸುಪ್ರಿಯೊ ಸಂಯೋಜಿಸಿರುವ ಬಿಜೆಪಿ ಧ್ಯೇಯಗೀತೆಯನ್ನು ಎಲ್ಲೂ ನುಡಿಸುವಂತಿಲ್ಲ ಎಂದು ಚುನಾವಣಾ ಆಯೋಗ ಸೂಚನೆ ನೀಡಿದೆ.
ಅಮಿತ್ ಚಕ್ರವರ್ತಿ ಎಂಬವರು ಬರೆದ ಈ ಗೀತೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಅರಳಲಿದೆ ಹಾಗೂ ತೃಣಮೂಲ ಕಾಂಗ್ರೆಸ್ ಗೆ ಅವಕಾಶವಿಲ್ಲ ಎಂದು ಬಿಂಬಿಸಲಾಗಿದೆ. ಬಾಬುಲ್ ಸುಪ್ರಿಯೊ ಈ ಬಗ್ಗೆ ಟ್ವೀಟ್ ಮಾಡಿದ್ದು, ತೃಣಮೂಲ ಇನ್ನು ಮುಂದೆ ಇರುವುದಿಲ್ಲ ಎಂದು ಪ್ರತಿಪಾದಿಸಿದ್ದರು.
ಹೆಚ್ಚುವರಿ ಚುನಾವಣಾ ಅಧಿಕಾರಿ ಸಂಜಯ್ ಬಸು ಈ ಬಗ್ಗೆ ಹೇಳಿಕೆ ನೀಡಿ, "ಮೊದಲನೆಯದಾಗಿ ಈ ಧ್ಯೇಯ ವಾಕ್ಯವು ಪ್ರಮಾಣಪತ್ರ ಪಡೆದಿಲ್ಲ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ. ಜತೆಗೆ ಇದನ್ನು ಹಲವು ಕಡೆಗಳಲ್ಲಿ ನುಡಿಸಲಾಗುತ್ತಿದ್ದು, ತಕ್ಷಣ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಬಾಬುಲ್ ಈ ಗೀತೆಗೆ ಪ್ರಮಾಣಪತ್ರ ಕೋರಿ ಅರ್ಜಿ ಸಲ್ಲಿಸಿದ್ದು, ಇದನ್ನು ಚುನಾವಣಾ ಆಯೋಗದ ನಿರ್ಧಾರಕ್ಕೆ ಬಿಡಲಾಗಿದೆ ಎಂದು ಹೇಳಿದ್ದಾರೆ.
ಮಾಧ್ಯಮ ಪ್ರಮಾಣಪತ್ರ ಮತ್ತು ಕಣ್ಗಾವಲು ಸಮಿತಿಯಿಂದ ಅನುಮತಿ ಪಡೆಯದಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಅಧಿಕಾರಿಗಳು ಸಪಷ್ಟಪಡಿಸಿದ್ದಾರೆ. ಈ ಗೀತೆಯ ಅಂಶಗಳ ವಿರುದ್ಧ ತೃಣಮೂಲ ಕಾಂಗ್ರೆಸ್ ಈಗಾಗಲೇ ಆಯೋಗಕ್ಕೆ ದೂರು ನೀಡಿದೆ.