ಅಯೋಧ್ಯೆ ವಿವಾದ: ಕೇಂದ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ನಿರ್ಮೋಹಿ ಅಖಾರ
“ಸರಕಾರದ ಕ್ರಮದಿಂದ ಹಲವು ದೇವಸ್ಥಾನಗಳು ನಾಶ”
ಹೊಸದಿಲ್ಲಿ, ಎ.9: ಅಯೋಧ್ಯೆಯ ವಿವಾದಿತ ಭೂಮಿಯ ಸುತ್ತಲಿನ ಹೆಚ್ಚುವರಿ ಭೂಮಿಯನ್ನು ಅದರ ಮೂಲ ಮಾಲಕರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಕೇಂದ್ರ ಕೈಗೊಳ್ಳುತ್ತಿರುವ ಕ್ರಮದ ವಿರುದ್ಧ ನಿರ್ಮೋಹಿ ಅಖಾರ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿದೆ. ಈ ನಿರ್ದಿಷ್ಟ ಭೂಮಿಯನ್ನು ಸರಕಾರ 1994ರಲ್ಲಿ ಸ್ವಾಧೀನ ಪಡಿಸಿಕೊಂಡಿತ್ತು.
ಈ ವರ್ಷದ ಜನವರಿಯಲ್ಲಿ ಸರಕಾರ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿ ವಿವಾದಿತ ಭೂಮಿಯ ಸುತ್ತಲಿನ 67 ಎಕರೆ ಜಮೀನನ್ನು ಮೂಲ ಮಾಲಕರಿಗೆ ಹಸ್ತಾಂತರಿಸಲು ಅನುಮತಿ ಕೋರಿತ್ತು. ಈ ಭೂಮಿ ವಿವಾದ ರಹಿತವಾಗಿದೆಯೆಂದು ಸರಕಾರ ಹೇಳಿತ್ತು. ಈ 67 ಎಕರೆ ಭೂಮಿಯ ಪೈಕಿ 42 ಎಕರೆ ರಾಮ ಜನ್ಮ ಭೂಮಿ ನ್ಯಾಸಕ್ಕೆ ಸೇರಿದ್ದು ಎಂದು ಹೇಳಲಾಗಿದೆ.
ಸರಕಾರದಿಂದ ಈ ಭೂಮಿಯ ಸ್ವಾಧೀನದಿಂದಾಗಿ ನಿರ್ಮೋಹಿ ಅಖಾರ ನಿರ್ಮಿಸಿದ್ದ ಹಲವು ದೇವಸ್ಥಾನಗಳು ನಾಶವಾಗಿದೆ ಎಂದು ಅದು ತನ್ನ ಅಪೀಲಿನಲ್ಲಿ ತಿಳಿಸಿದೆಯಲ್ಲದೆ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದವನ್ನು ಸುಪ್ರೀಂ ಕೋರ್ಟ್ ಸ್ವತಃ ಪರಿಹರಿಸಬೇಕೆಂದು ಕೋರಿದೆ.
ಆದರೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ವಿವಾದ ಪರಿಹರಿಸಲು ಸಂಧಾನ ಪ್ರಕ್ರಿಯೆ ನಡೆಯುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.