ಹೈಕೋರ್ಟ್ಗಳ ಮುಖ್ಯ ನ್ಯಾಯಾಧೀಶ ಸ್ಥಾನಕ್ಕೆ ಐವರು ನ್ಯಾಯಾಧೀಶರ ಹೆಸರುಗಳ ಶಿಫಾರಸು
ಹೊಸದಿಲ್ಲಿ,ಎ.10: ರಾಜಸ್ಥಾನ, ಕೇರಳ, ಮೇಘಾಲಯ, ಆಂಧ್ರಪ್ರದೇಶ ಮತ್ತು ಛತ್ತೀಸ್ಗಡ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರಾಗಿ ನೇಮಕಕ್ಕೆ ಐವರು ನ್ಯಾಯಾಧೀಶರ ಹೆಸರುಗಳನ್ನು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಶಿಫಾರಸುಮಾಡಿದೆ.
ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಎಸ್.ರವೀಂದ್ರ ಭಟ್,ಕೇರಳ ಹೈಕೋರ್ಟ್ ನ್ಯಾಯಾಧೀಶ ಪಿ.ಆರ್.ರಾಮಚಂದ್ರ ಮೆನನ್,ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ್ಯಾಯಾಧೀಶ ಎ.ಕೆ.ಮಿತ್ತಲ್,ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ವಿಕ್ರಮನಾಥ್ ಮತ್ತು ಬಾಂಬೆ ಹೈಕೋರ್ಟ್ ನ್ಯಾಯಾಧೀಶ ಎ.ಎಸ್.ಓಕಾ ಅವರು ಈ ಐವರು ನ್ಯಾಯಮೂರ್ತಿಗಳಾಗಿದ್ದಾರೆ.
ನ್ಯಾ.ಪ್ರದೀಪ ನಂದ್ರಜೋಗ್ ಅವರು ಇತ್ತೀಚಿಗೆ ಬಾಂಬೆ ಹೈಕೋರ್ಟ್ಗೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ತೆರವಾಗಿರುವ ರಾಜಸ್ಥಾನ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರ ಸ್ಥಾನಕ್ಕೆ ನ್ಯಾ.ಭಟ್ ಅವರ ಹೆಸರನ್ನು ಹಾಗೂ ನ್ಯಾ.ಎ.ಕೆ.ತ್ರಿಪಾಠಿ ಅವರರಾಜೀನಾಮೆಯಿಂದ ತೆರವಾಗಿರುವ ಛತ್ತೀಸ್ಗಡ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರ ಸ್ಥಾನಕ್ಕೆ ನ್ಯಾ.ಮೆನನ್ ಅವರ ಹೆಸರುಗಳನ್ನು ಕೊಲಿಜಿಯಂ ಶಿಫಾರಸು ಮಾಡಿದೆ.
ನ್ಯಾ.ಎಂ.ವೈ.ಮೀರ್ ಅವರು ಶೀಘ್ರವೇ ನಿವೃತ್ತರಾಗಲಿದ್ದು,ತನ್ಮೂಲಕ ತೆರವಾಗಲಿರುವ ಮೇಘಾಲಯ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರ ಸ್ಥಾನಕ್ಕೆ ನ್ಯಾ.ಮಿತ್ತಲ್ ಅವರ ಹೆಸರನ್ನು ಅದು ಸೂಚಿಸಿದೆ.