ಕಮಲನಾಥ ಆಪ್ತರ ಮೇಲೆ ಐಟಿ ದಾಳಿ: ರಾಹುಲ್ ಮೌನವನ್ನು ಪ್ರಶ್ನಿಸಿದ ಸ್ಮೃತಿ ಇರಾನಿ
ಅಮೇಠಿ(ಉ.ಪ್ರ),ಎ.11: ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಕಮಲನಾಥ್ ಅವರ ಆಪ್ತರ ಮೇಲೆ ಆದಾಯ ತೆರಿಗೆ ದಾಳಿಗಳ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಮೌನವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಗುರುವಾರ ಪ್ರಶ್ನಿಸಿದರು.
ಇರಾನಿ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ವಿರುದ್ಧ ಸೆಣಸಲಿದ್ದಾರೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ರಾಹುಲ್ ವಿರುದ್ಧ ಸ್ಪರ್ಧಿಸಿದ್ದ ಇರಾನಿ 1.07 ಲ.ಮತಗಳ ಅಂತರದಿಂದ ಸೋತಿದ್ದರು.
ಅಮೇಠಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ‘ಚೌಕಿದಾರ್ ಚೋರ್ ಹೈ’ಎಂಬ ರಾಹುಲ್ ಹೇಳಿಕೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಇರಾನಿ,ಲೂಟಿ ಮಾಡಿದ್ದ ಹಣವನ್ನು ದಿಲ್ಲಿಯ ತುಘ್ಲಕ್ ರಸ್ತೆಯ ನಿವಾಸಿಗೆ ವರ್ಗಾಯಿಸಿದ್ದ ಮಧ್ಯಪ್ರದೇಶದ ಸಜ್ಜನ ವ್ಯಕ್ತಿ ಯಾರೆಂದು ರಾಹುಲ್ ಏಕೆ ಬಾಯಿ ಬಿಡುತ್ತಿಲ್ಲ?, ಕಾಂಗ್ರೆಸ್ ಎಂತಹ ರಾಜಕೀಯದಲ್ಲಿ ತೊಡಗಿದೆ?, ಅದರ ನಾಯಕರು ಗರ್ಭಿಣಿಯರು ಮತ್ತು ಬಡಮಕ್ಕಳ ಕಲ್ಯಾಣಕ್ಕೆ ಮೀಸಲಾದ ಹಣವನ್ನು ಲೂಟಿ ಮಾಡುವ ಪಾಪಕಾರ್ಯದಲ್ಲಿ ಮುಳುಗಿದ್ದಾರೆ ಎಂದರು.
ಕಮಲನಾಥ ಆಪ್ತರ ನಿವಾಸಗಳ ಮೇಲಿನ ಐಟಿ ದಾಳಿಗಳ ಬಗ್ಗೆ ರಾಹುಲ್ ವೌನವು ಅವರ ನಿಜಬಣ್ಣವನ್ನು ಬಯಲುಗೊಳಿಸಿದೆ ಎಂದರು.