‘ನಿನ್ನದು ಅತಿಯಾಯಿತು, ಬೇಗನೆ ಮನೆಗೆ ವಾಪಸಾಗು ಮಗನೆ’
ಪುತ್ರ ತೇಜ್ಪ್ರತಾಪ್ಗೆ ತಾಯಿ ರಾಬ್ರಿದೇವಿ ಭಾವನಾತ್ಮಕ ಮನವಿ
ರಾಂಚಿ, ಎ.13: ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ರ ಪತ್ನಿ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ ತನ್ನ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ಗೆ ಮನೆಗೆ ಮರಳುವಂತೆ ಮನವಿ ಮಾಡಿದ್ದಾರೆ.
ಬಿಹಾರದ ಲೋಕಸಭೆಯ ಏಳು ಹಂತದ ಮತದಾನ ಆರಂಭವಾದ ಮರುದಿನ ಸುದ್ದಿಗಾರರೊಂದಿಗೆ ಮಾತನಾಡಿದ ರಾಬ್ರಿದೇವಿ, ಕುಟುಂಬವನ್ನು ತೊರೆದು ಪಾಟ್ನಾದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ ಹಿರಿಯ ಮಗ ತೇಜ್ಪ್ರತಾಪ್ ನಿರ್ಧಾರದ ಬಗ್ಗೆ ನೋವು ಹೊರಹಾಕಿದರು. ‘‘ನಿನ್ನದು ಅತಿಯಾಯಿತು. ಬೇಗನೇ ಮನೆಗೆ ವಾಪಸಾಗು ಮಗನೆ’’ ಎಂದು ವಿನಂತಿಸಿಕೊಂಡರು.
ಕಳೆದ ವರ್ಷ ತನ್ನ ಪತ್ನಿಯಿಂದ ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಳಿಕ ರಾಂಚಿಯಲ್ಲಿ ತನ್ನ ತಂದೆ ಲಾಲು ಪ್ರಸಾದ್ರನ್ನು ಭೇಟಿಯಾಗಿದ್ದ ತೇಜ್ಪ್ರತಾಪ್ ಆ ಬಳಿಕ ಮನೆಗೆ ವಾಪಸಾಗಿರಲಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ. ತೇಜ್ಪ್ರತಾಪ್ ಕಳೆದ ವರ್ಷ ಆರ್ಜೆಡಿಯ ಹಿರಿಯ ನಾಯಕನ ಪುತ್ರಿ ಐಶ್ವರ್ಯಾರನ್ನು ವಿವಾಹವಾಗಿದ್ದರು.
‘‘ತನ್ನ ಇಬ್ಬರು ಮಕ್ಕಳಾದ ತೇಜ್ಪ್ರತಾಪ್ ಹಾಗೂ ತೇಜಸ್ವಿ ಯಾದವ್ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂಬ ವರದಿಯಲ್ಲಿ ಸತ್ಯಾಂಶವಿಲ್ಲ. ಕೆಲವರು ನನ್ನ ಮಗನ ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಯು ಪಕ್ಷದವರು ಇದರ ಹಿಂದಿರುವ ಸಾಧ್ಯತೆಯಿದೆ. ನಾನು ಪ್ರತಿದಿನ ನನ್ನ ಮಗನೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದೇನೆ’’ ಎಂದರು.