ವಶಪಡಿಸಿದ್ದು, 16.65 ಕೋಟಿ ರೂ.; ತೋರಿಸಿದ್ದು 9.66 ಕೋಟಿ ರೂ. !
ವಶಪಡಿಸಿದ ಹಣ ‘ನುಂಗಿದ’ ಪೊಲೀಸರು: ಕ್ರೈಸ್ತ ಪಾದ್ರಿ ಆರೋಪ
ಜಲಂಧರ್,ಎ.13: ಸ್ಥಳೀಯ ಪೊಲೀಸರು ತನ್ನ ನಿವಾಸದಿಂದ 16.65 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದರೂ, 9.66 ಕೋಟಿ ರೂ. ದೊರೆತಿರುವುದಾಗಿ ತೋರಿಸಿದ್ದಾರೆಂಬ ಚರ್ಚ್ ಪಾದ್ರಿಯೊಬ್ಬರ ಆರೋಪದ ತನಿಖೆ ನಡೆಸುತ್ತಿರುವ ಪಂಜಾಬ್ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ)ವು ಶನಿವಾರ ತನ್ನ ವರದಿಯನ್ನು ಸಲ್ಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪೊಲೀಸರು ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅದು ಶಿಫಾರಸು ಮಾಡಿದೆ.
ಫಾದರ್ ಆ್ಯಂಟನಿ ಮಾಡಶ್ಯೇರಿ ಹಾಗೂ ಇತರ ಐವರನ್ನು ತಪಾಸಣಾ ಠಾಣೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದರೆಂಬ ಖನ್ನಾ ಠಾಣಾಯ ಪೊಲೀಸರ ಹೇಳಿಕೆಯನ್ನು ಕೂಡಾ ಸಿಟ್ ವರದಿಯು ತಳ್ಳಿಹಾಕಿದೆ.
ತನ್ನ ನಿವಾಸದಿಂದ ವಶಪಡಿಸಿಕೊಳ್ಳಲಾದ 16.65 ಕೋಟಿ ರೂ. ಹಣದ ಪೈಕಿ 6.99 ಲಕ್ಷ ರೂ.ಗಳನ್ನು ಪೊಲೀಸರು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆಂದು ಜಲಂಧರ್ ಡಯೋಸಿಸ್ನ ಪಾದ್ರಿ ಅಂಥೋಣಿ ಅವರು ಆರೋಪಿಸಿದ ಮರುದಿನವೇ ಪೊಲೀಸ್ ಮಹಾನಿರೀಕ್ಷಕ (ಅಪರಾಧ ವಿಭಾಗ) ಪ್ರವೀಣ್ ಸಿನ್ಹಾ ತನಿಖೆಗೆ ಆದೇಶಿಸಿದ್ದರು.
ಜಲಂಧರ್ ಜಿಲ್ಲೆಯ ಖನ್ನಾ ಠಾಣಾ ಪೊಲೀಸರು, ಕಳೆದ ಮಾರ್ಚ್ 29ರಂದು, ದೋರಹಾದಲ್ಲಿರುವ ಜಿಟಿ ರಸ್ತೆಯ ತಪಾಸಣಾಠಾಣೆಯ ಬಳಿ ತಾವು ಫಾದರ್ ಆ್ಯಂಥೋಣಿ ಸೇರಿದಂತೆ ಆರು ಮಂದಿಯಿಂದ 9.66 ಕೋಟಿ ರೂ. ಹವಾಲಾ ಹಣವನ್ನು ವಶಪಡಿಸಿಕೊಂಡಿರುವುದಾಗಿ ಘೋಷಿಸಿದ್ದರು. ಇದಾದ ಎರಡು ದಿನಗಳ ಬಳಿಕ ಫಾದರ್ ಆ್ಯಂಥೋಣಿ ಮಾಡಶ್ಯೇರಿ ಅವರು ಪತ್ರಿಕಾಗೋಷ್ಠಿಯನ್ನು ಕರೆದು, ಪೊಲೀಸರು ತಮ್ಮಿಂದ 16.65 ಕೋಟಿ ರೂ. ವಶಪಡಿಸಿಕೊಂಡಿದ್ದರೂ, 9.66 ಕೋಟಿ ರೂ.ಗಳನ್ನು ಮಾತ್ರ ತೋರಿಸುತ್ತಿದ್ದಾರೆಂದ ಆರೋಪಿಸಿದ್ದರು. ತಾನು ಪುಸ್ತಕ ಮಾರಾಟದ ಸಂಸ್ಥೆಯೊಂದನ್ನು ನಡೆಸುತ್ತಿದ್ದು, ಅದರ ಮೂಲಕ ತನಗೆ ಈ ಹಣ ಬಂದಿರುವುದಾಗಿ ಫಾದರ್ ಆ್ಯಂಥೋಣಿ ತಿಳಿಸಿದ್ದರು.