ಇವಿಎಂ ಭದ್ರತಾಕೊಠಡಿಯೊಳಗೆ ಫೋಟೊ ಕ್ಲಿಕಿಸಿದ ಟಿಆರ್ಎಸ್ ನಾಯಕನ ಬಂಧನ
ಹೈದರಾಬಾದ್, ಎ.14: ಇವಿಎಂ ಯಂತ್ರಗಳಿಟ್ಟಿರುವ ಭದ್ರತಾಕೊಠಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಲ್ಲದೆ ಫೋಟೊವನ್ನು ತೆಗೆದಿರುವ ಟಿಆರ್ಎಸ್ ನಾಯಕ ಎನ್.ವೆಂಕಟೇಶ್ ಎಂಬಾತನನ್ನು ಶನಿವಾರ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಸ್ಥಳೀಯ ಟಿಆರ್ಎಸ್ ಮುಖಂಡನಾಗಿದ್ದು, ಕೀಸಾರ ಸರಪಂಚ ಮಾಧುರಿ ಎಂಬಾಕೆಯ ಪತಿಯಾಗಿದ್ದಾರೆ.
‘‘ಚುನಾವಣೆಯಲ್ಲಿ ಬಳಕೆಯಾಗಿದ್ದ ಇವಿಎಂಗಳನ್ನು ಇಡಲಾಗಿರುವ ಭದ್ರತಾಕೊಠಡಿಗೆ ವೆಂಕಟೇಶ್ ಪ್ರವೇಶಿಸಿದ್ದ. ಬೊಗ್ರಾಮ್ ಪ್ರದೇಶದಲ್ಲಿರುವ ಈ ಕೊಠಡಿಯನ್ನು ಸೀಲ್ ಮಾಡಲಾಗಿತ್ತು. ಬಂಧಿತ ವೆಂಕಟೇಶ್ ಮಲ್ಕಾಜ್ಗಿರಿ ಕ್ಷೇತ್ರದಲ್ಲಿ ಟಿಆರ್ಎಸ್ ಲೋಕಸಭಾ ಅಭ್ಯರ್ಥಿಯ ಚುನಾವಣಾ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದ’’ ಎಂದು ವೃತ್ತ ನಿರೀಕ್ಷಕ ನರೇಂದರ್ ಗೌಡ್ ಹೇಳಿದ್ದಾರೆ.
ಬಂಧಿತ ವೆಂಕಟೇಶ್ ವಿರುದ್ಧ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಆತನನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಿಕೊಡುವ ಸಾಧ್ಯತೆಯಿದೆ ಎಂದು ಗೌಡ್ ಹೇಳಿದ್ದಾರೆ.
Next Story