ಮಗನಿಗೆ ಟಿಕೆಟ್ ಸಿಕ್ಕಿದ ಹಿನ್ನೆಲೆಯಲ್ಲಿ ಹುದ್ದೆ ತೊರೆಯಲು ಮುಂದಾದ ಕೇಂದ್ರ ಸಚಿವ
ಹೊಸದಿಲ್ಲಿ,ಎ.14: ಬಿಜೆಪಿಯು ಹರ್ಯಾಣದ ಹಿಸ್ಸಾರ್ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ತನ್ನ ಪುತ್ರ ಬೃಜೇಂದ್ರ ಸಿಂಗ್ ಅವರ ಹೆಸರನ್ನು ಘೋಷಿಸಿದ ಬಳಿಕ ಕೇಂದ್ರ ಉಕ್ಕು ಸಚಿವ ಚೌಧರಿ ಬೀರೇಂದ್ರ ಸಿಂಗ್ ಅವರು ರವಿವಾರ ಸಂಪುಟದ ಹುದ್ದೆಗೆ ಮತ್ತು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸುವ ಕೊಡುಗೆಯನ್ನು ಮುಂದಿಟ್ಟಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,‘‘ಚುನಾವಣೆಗಳ ವಿಷಯ ಬಂದಾಗ ವಂಶಪಾರಂಪರ್ಯ ಅಧಿಕಾರಕ್ಕೆ ಬಿಜೆಪಿ ವಿರುದ್ಧವಾಗಿದೆ. ಹೀಗಾಗಿ ನನ್ನ ಪುತ್ರನಿಗೆ ಟಿಕೆಟ್ ದೊರಕಿರುವುದರಿಂದ ರಾಜ್ಯಸಭಾ ಸದಸ್ಯತ್ವ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ನಾನು ಭಾವಿಸಿದ್ದೇನೆ. ಈ ಬಗ್ಗೆ ನಾನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರವನ್ನು ಬರೆದಿದ್ದೇನೆ. ಈ ಕ್ಷಣದಿಂದ ರಾಜೀನಾಮೆ ಸಲ್ಲಿಸಲು ನಾನು ಸಿದ್ಧನಿದ್ದೇನೆ’’ ಎಂದು ತಿಳಿಸಿದರು.
ಬಿಜೆಪಿಯು ರವಿವಾರ ಹರ್ಯಾಣ,ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಿಗಾಗಿ ತನ್ನ ೨೦ನೇ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಹರ್ಯಾಣಕ್ಕೆ ಇಬ್ಬರು,ಮಧ್ಯಪ್ರದೇಶಕ್ಕೆ ಮೂವರು ಮತ್ತು ರಾಜಸ್ಥಾನಕ್ಕೆ ಓರ್ವ ಅಭ್ಯರ್ಥಿಯ ಹೆಸರುಗಳನ್ನು ಅದು ಘೋಷಿಸಿದೆ. ಪ.ಬಂಗಾಳದ ಉಲುಬೆರಿಯಾ ಪುರ್ಬಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ತನ್ನ ಅಭ್ಯರ್ಥಿಯನ್ನು ಅದು ಪ್ರಕಟಿಸಿದೆ.