ಚಾಯ್ವಾಲ ಪ್ರಧಾನಿಯಾಗಲು ಬಾಬಾಸಾಹೇಬ್ ಅಂಬೇಡ್ಕರ್ರ ಸಂವಿಧಾನ ಕಾರಣ: ಪ್ರಧಾನಿ ಮೋದಿ
ಲಕ್ನೋ, ಎ. 14: ಬಾಬಾಸಾಹೇಬ್ ಭೀಮ್ರಾವ್ ಅಂಬೇಡ್ಕರ್ ಅವರ ಸಂವಿಧಾನದಿಂದ ವಂಚಿತ ಹಾಗೂ ಶೋಷಿತ ಸಮುದಾಯದ ವ್ಯಕ್ತಿ ರಾಷ್ಟ್ರಪತಿಯಾಗಲು, ರೈತ ಕುಟುಂಬದ ವ್ಯಕ್ತಿ ಉಪ ರಾಷ್ಟ್ರಪತಿಯಾಗಲು ಹಾಗೂ ಚಾಯ್ವಾಲ ಪ್ರಧಾನಿಯಾಗಲು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶದ ಪ್ರತಿಪಕ್ಷಗಳ ಮೈತ್ರಿಯ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸದ ಮೈತ್ರಿ ಕೂಟ ಪ್ರಧಾನ ಮಂತ್ರಿಯನ್ನು ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಅಲಿಗಢ ಜಿಲ್ಲೆಯಲ್ಲಿ ರವಿವಾರ ನಡೆದ ಚುನಾವಣಾ ಪ್ರಚಾರ ರ್ಯಾಲಿಯ ಸಂದರ್ಭ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮಾತನಾಡಿದ ಮೋದಿ, ವಂಚಿತ ಹಾಗೂ ಶೋಷಿತ ವರ್ಗದ ಕುಟುಂಬದಿಂದ ಬಂದ ವ್ಯಕ್ತಿ ರಾಷ್ಟ್ರಪತಿ (ರಾಮನಾಥ್ ಕೋವಿಂದ್)ಯಾಗಲು, ರೈತ ಕುಟುಂಬದಿಂದ ಬಂದ ವ್ಯಕ್ತಿ ಉಪ ರಾಷ್ಟ್ರಪತಿ (ಎಂ. ವೆಂಕಯ್ಯ ನಾಯ್ಡು)ಯಾಗಲು ಬಾಬಾ ಸಾಹೇಬ್ ಅವರ ಸಂವಿಧಾನದ ಕಾರಣವಾಯಿತು ಎಂದರು.
ಚಾಯ್ವಾಲ ಪ್ರಧಾನಿಯಾಗಿರುವುದಕ್ಕೆ ಬಾಬಾಸಾಹೇಬ್ ಅವರ ಸಂವಿಧಾನಕ್ಕೆ ಧನ್ಯವಾದಗಳು ಎಂದು ಮೋದಿ ಹೇಳಿದರು.