ಕುಟುಂಬಸ್ಥರಿಗೆ, ಪುಲ್ವಾಮ ಹುತಾತ್ಮರಿಗಾಗಿ ಪ್ರಾರ್ಥನೆ ಸಲ್ಲಿಸಿದ ರಾಹುಲ್ ಗಾಂಧಿ
ವಯನಾಡ್, ಎ.17: ಇಲ್ಲಿನ ತಿರುನೆಲ್ಲಿ ದೇವಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಾರ್ಥನೆ ಸಲ್ಲಿಸಿ ನಂತರ ತಮ್ಮ ಪೂರ್ವಜರಿಗೆ ಹಾಗೂ ಪುಲ್ವಾಮ ಹುತಾತ್ಮರಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಅಮೇಥಿ ಜತೆಗೆ ವಯನಾಡ್ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ಜತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಕೂಡ ಇದ್ದರು. “ಕಳೆದ ಬಾರಿ ಕೂಡ ರಾಹುಲ್ ಇಲ್ಲಿಗೆ ಬರಲು ಬಯಸಿದ್ದರೂ ಕೆಲವೊಂದು ಭದ್ರತಾ ನಿರ್ಬಂಧಗಳಿಂದ ಅದು ಸಾಧ್ಯವಾಗಿಲ್ಲ. ಅವರ ತಂದೆ ರಾಜೀವ್ ಗಾಂಧಿ ಅವರ ಚಿತಾಭಸ್ಮವನ್ನು ಇಲ್ಲಿಯೇ ಪಾಪನಾಶಿನಿ ನದಿಯಲ್ಲಿ ಬಿಡಲಾಗಿತ್ತು'' ಎಂದು ವೇಣುಗೋಪಾಲ್ ಸುದ್ದಿಗಾರರಿಗೆ ತಿಳಿಸಿದರು.
ಅಲ್ಲಿನ ದೇವಳದ ಅರ್ಚಕರ ಸೂಚನೆಯಂತೆ ಅವರು ತಮ್ಮ ಅಜ್ಜಿ ಇಂದಿರಾ ಗಾಂಧಿ, ತಂದೆ ರಾಜೀವ್ ಗಾಂಧಿ, ಪೂರ್ವಜರು ಹಾಗು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕೆಲವೊಂದು ದಾರ್ಮಿಕ ಪ್ರಕಿಯೆಗಳನ್ನು ನಡೆಸಿದರು ಎಂದೂ ಅವರು ಮಾಹಿತಿ ನೀಡಿದರು.
ರಾಹುಲ್ ಅವರು ಇಂದು ಕೇರಳದ ಅಲಪ್ಪುಳ ಮತ್ತು ತಿರುವನಂತಪುರಂನಲ್ಲಿ ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.