ಗೋಡ್ಸೆ ಬದುಕಿದ್ದರೆ ಆತನಿಗೂ ಬಿಜೆಪಿ ಟಿಕೆಟ್ ನೀಡುತ್ತಿತ್ತು: ಕಾಂಗ್ರೆಸ್ ವ್ಯಂಗ್ಯ
ಮುಂಬೈ, ಎ. 21: ಮಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಭೋಪಾಲ್ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, "ಮಹಾತ್ಮ ಗಾಂಧೀಜಿಯವರ ಹಂತಕ ನಾಥೂರಾಂ ಗೋಡ್ಸೆ ಬದುಕಿದ್ದರೆ ಬಿಜೆಪಿ ಅವರಿಗೂ ಟಿಕೆಟ್ ನೀಡುತ್ತಿತ್ತು" ಎಂದು ವ್ಯಂಗ್ಯವಾಡಿದೆ.
ಮಲೇಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಪ್ರಜ್ಞಾ, ಜಾಮೀನು ಮೇಲೆ ಬಿಡುಗಡೆ ಹೊಂದಿದ್ದು, ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ದೇಶವ್ಯಾಪಿ ಆಕ್ರೋಶ ಎದುರಿಸುತ್ತಿದ್ದಾರೆ. ತಮಗೆ ಚಿತ್ರಹಿಂಸೆ ನೀಡಿದ್ದಕ್ಕಾಗಿ ನಾನು ನೀಡಿದ ಶಾಪದಿಂದ ಕರ್ಕರೆ ಗುಂಡಿಗೆ ಬಲಿಯಾದರು ಎಂದು ಸಾಧ್ವಿ ಹೇಳಿಕೆ ನೀಡಿದ್ದರು.
"ಭಯೋತ್ಪಾದನೆ ಮತ್ತು ದೇಶದ್ರೋಹಿ ಚಟುವಟಿಕೆಗಳ ಆರೋಪಿಯನ್ನು ಬಿಜೆಪಿ ಬೆಂಬಲಿಸಿರುವುದು ನಾಚಿಕೆಗೇಡು; ದೇಶದ ಪ್ರಧಾನಿ ಹಾಗೂ ಬಿಜೆಪಿಯ ತಾರಾ ಪ್ರಚಾರಕ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತಿತರರು ದೇಶದ ಸೈನಿಕರ ಬಲಿದಾನದ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ. ಆದರೆ ಹುತಾತ್ಮ ಪೊಲೀಸ್ ಅಧಿಕಾರಿಯೊಬ್ಬರ ಬಗ್ಗೆ ಇಂಥ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಗ್ಗೆ ಕ್ಷಮೆ ಯಾಚಿಸುವ ಸೌಜನ್ಯವೂ ಇಲ್ಲ" ಎಂದು ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಹೇಳಿದ್ದಾರೆ.
ಇಂಥ ಹೇಳಿಕೆ ನೀಡಿದ ಬಳಿಕವೂ ಅವರನ್ನು ಪಕ್ಷದಿಂದ ಕಿತ್ತುಹಾಕಿಲ್ಲ ಎಂದಾದರೆ ಬಿಜೆಪಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂಬ ಅರ್ಥ ಎಂದು ಅವರು ಟೀಕಿಸಿದರು.