ಮುಖವಾಡದ ಹಿಂದೆ ಏನಿದೆ ಎಂದು ತಿಳಿದಿರಲಿಲ್ಲ: ಮೋದಿಯನ್ನು ಟೀಕಿಸಿದ ವಿಜೇಂದರ್ ಸಿಂಗ್
ಹೊಸದಿಲ್ಲಿ, ಎ.24: ಬಾಕ್ಸರ್ ವಿಜೇಂದರ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವು ನೋಡಬಹುದು. ಇಬ್ಬರೂ ಹಲವು ಬಾರಿ ಪರಸ್ಪರ ಟ್ವೀಟ್ ಮಾಡಿಕೊಂಡಿದ್ದಾರೆ. 2016ರಲ್ಲಿ ಪ್ರಧಾನಿ ಮೋದಿ ವಿಜೇಂದರ್ ಅವರ ಪ್ರಥಮ ವೃತ್ತಿಪರ ಬಾಕ್ಸಿಂಗ್ ಪಂದ್ಯದ ಗೆಲುವಿಗೆ ಅವರನ್ನು ಅಭಿನಂದಿಸಿದ್ದರು. ಪ್ರಧಾನಿ ಜತೆ ತಾವಿರುವ ಫೋಟೋವನ್ನು ಕೂಡ ವಿಜೇಂದರ್ ಶೇರ್ ಮಾಡಿದ್ದರು. ಆದರೆ ಈಗ 2019ರಲ್ಲಿ ಎಲ್ಲವೂ ಬದಲಾಗಿ ಬಿಟ್ಟಿದೆ. ವಿಜೇಂದರ್ ಈಗ ಪ್ರಧಾನಿ ಜನರಿಗೆ ಸುಳ್ಳು ಹೇಳಿದ್ದಾರೆಂದು ಆರೋಪಿಸುತ್ತಾರೆ.
“ನೀವು ಒಬ್ಬರನ್ನು ಹೊಗಳುವಾಗ ಮುಖವಾಡದ ಹಿಂದೆ ಏನಿರುತ್ತದೆ ಎಂದು ತಿಳಿದಿರುವುದಿಲ್ಲ. ಬಿಜೆಪಿಗೆ 2014ರಲ್ಲಿ ಅತ್ಯಂತ ದೊಡ್ಡ ಗೆಲುವು” ಎಂದು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿಜೇಂದರ್ ಸಿಂಗ್ ಹೇಳುತ್ತಾರೆ.
“15-20 ಲಾಖ್ ತೋ ವೈಸೇ ಹೀ ಖಾತೆ ಮೇ ಆ ಜಾಯೇಂಗೆ ( ರೂ 15-20 ಲಕ್ಷ ಬಡವರ ಖಾತೆಯಲ್ಲಿ ಜಮೆಯಾಗುವುದು) ಯು ಟ್ಯೂಬ್ ನಲ್ಲಿ ಈ ವೀಡಿಯೋ ಈಗಲೂ ನನ್ನ ಬಳಿ ಇದೆ. ಅದು ಸುಳ್ಳು. ಜನರು, ಮುಖ್ಯವಾಗಿ ಬಡವರು ಅವರನ್ನು ನಂಬಿ ಬಿಟ್ಟರು. ಅವರಿಗೆ ತಮ್ಮ ಆಶ್ವಾಸನೆ ಈಡೇರಿಸಲು ಸಾಧ್ಯವಿಲ್ಲ'' ಎಂದು ಅವರು ಹೇಳಿದರು.
ದಕ್ಷಿಣ ದಿಲ್ಲಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಆಯ್ಕೆಯಾಗಿರುವ ವಿಜೇಂದರ್ ತಾವೇಕೆ ಕಾಂಗ್ರೆಸ್ ಪಕ್ಷವನ್ನು ಆರಿಸಿದ್ದು ಎಂಬುದಕ್ಕೂ ವಿವರಣೆ ನೀಡಿದರು. ``ನನ್ನ ಯೋಚನೆ ಹಾಗೂ ಅಭಿಪ್ರಾಯಗಳು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಹೋಲಿಕೆಯಾಗುತ್ತವೆ. ಅವರಲ್ಲಿ ಉತ್ತಮ ನಾಯಕರಿದ್ದಾರೆ, ಅವರು ಭವಿಷ್ಯದ ಬಗ್ಗೆ ಉತ್ತಮ ಮಾತುಗಳನ್ನಾಡುತ್ತಾರೆ,'' ಎಂದರು.