ರಜನೀಕಾಂತ್ 'ದರ್ಬಾರ್' ಚಿತ್ರತಂಡಕ್ಕೆ ಕಲ್ಲೇಟು
ಮುಂಬೈ, ಮೇ 3: ಸೂಪರ್ಸ್ಟಾರ್ ರಜನೀಕಾಂತ್ ಅವರ 'ದರ್ಬಾರ್' ಚಿತ್ರ ಬಿಡುಗಡೆಗೆ ಮುನ್ನವೇ ಸುದ್ದಿಯಾಗುತ್ತಿದ್ದು, ಇತ್ತೀಚೆಗೆ ಸೆಟ್ನಿಂದಲೇ ಫೋಟೊಗಳು ಆನ್ಲೈನ್ನಲ್ಲಿ ಸೋರಿಕೆಯಾಗಿತ್ತು. ಇದೀಗ ದರ್ಬಾರ್ ಚಿತ್ರದ ತಂತ್ರಜ್ಞರ ಮೇಲೆ ಮುಂಬೈನಲ್ಲಿ ವಿದ್ಯಾರ್ಥಿಗಳು ಕಲ್ಲೆಸೆದಿರುವ ಘಟನೆ ಬೆಳಕಿಗೆ ಬಂದಿದೆ.
ಮುಂಬೈ ಕಾಲೇಜು ಕ್ಯಾಂಪಸ್ನಲ್ಲಿ ನಡೆಯುತ್ತಿರುವ ಚಿತ್ರೀಕರಣದ ವೇಳೆ ಹಲವು ವಿದ್ಯಾರ್ಥಿಗಳು ಫೋಟೊ ಹಾಗೂ ವೀಡಿಯೊ ಚಿತ್ರೀಕರಿಸಿಕೊಳ್ಳಲು ಮುಂದಾದರು. ಆದರೆ ಚಿತ್ರತಂಡದ ಸಿಬ್ಬಂದಿ ಇದನ್ನು ತಡೆಯಲು ಮುಂದಾದರು. ವಿದ್ಯಾರ್ಥಿಗಳ ಗುಂಪು ಸೆಟ್ನ ತೀರಾ ಸನಿಹಕ್ಕೆ ಬಂದಾಗ ಗುಂಪುಗಳ ನಡುವೆ ಘರ್ಷಣೆ ಆರಂಭವಾಯಿತು ಎಂದು ತಿಳಿದುಬಂದಿದೆ.
ಇದರಿಂದ ಉದ್ರಿಕ್ತಗೊಂಡ ವಿದ್ಯಾರ್ಥಿ ಸಮೂಹ, ಕಾಲೇಜು ಕಟ್ಟಡದ ಮೇಲಿನಿಂದ ಚಿತ್ರತಂಡದತ್ತ ಕಲ್ಲೆಸೆಯಲು ಆರಂಭಿಸಿತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಚಿತ್ರದ ನಿರ್ದೇಶಕ ಎ.ಆರ್.ಮುರುಗಾದಾಸ್ ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಳವನ್ನು ಬದಲಿಸಲಾಗುತ್ತದೆಯೇ ಎನ್ನುವುದು ಖಚಿತವಾಗಿಲ್ಲ.
25 ವರ್ಷಗಳ ಬಳಿಕ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಜನೀಕಾಂತ್ ಅವರ ಚಿತ್ರದ ಸೆಟ್ಗೆ ನಟಿ ನಯನತಾರ ಸೇರಿಕೊಂಡಿದ್ದಾರೆ. ಶೂಟಿಂಗ್ ಸ್ಥಳದಿಂದ ಸೋರಿಕೆಯಾದ ಚಿತ್ರದಲ್ಲಿ ನಿವೇತಾ ಥಾಮಸ್ ಮತ್ತು ಯೋಗಿ ಬಾಬು ಇದ್ದು, ಇದನ್ನು ಬಳಿಕ ದೃಢಪಡಿಸಲಾಗಿದೆ.