ತನಿಖಾ ಪತ್ರಿಕೋದ್ಯಮ: ‘ದಿ ಕಾರವಾನ್’ನ ನಿಲೀನಾಗೆ ಎಸಿಜೆ ಪ್ರಶಸ್ತಿ
ಹೊಸದಿಲ್ಲಿ,ಮೇ 5: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಕುರಿ ವರದಿಗಾಗಿ ‘ದಿ ಕಾರವಾನ್’ ಪತ್ರಿಕೆಯ ನಿಲೀನಾ ಎಂ.ಎಸ್. ಅವರಿಗೆ ತನಿಖಾ ಪತ್ರಿಕೋದ್ಯಮಕ್ಕಾಗಿ ನೀಡಲಾಗುವ ಪ್ರತಿಷ್ಠಿತ ‘ಎಸಿಜಿ ಪ್ರಶಸ್ತಿ’ ಲಭಿಸಿದೆ.
ಭಾರತೀಯ ಓದುಗರು, ವೀಕ್ಷಕರು ಹಾಗೂ ಶೋತೃಗಳಿಗಾಗಿನ ತನಿಖಾ ಪತ್ರಿಕೋದ್ಯಮದ ಶ್ರೇಷ್ಠ ಕೃತಿಗಳನ್ನು ಗುರುತಿಸಲು ಹಾಗೂ ಉತ್ತೇಜಿಸುವ ಉದ್ದೇಶದಿಂದ ಮಾಧ್ಯಮ ಅಭಿವೃದ್ಧಿ ಪ್ರತಿಷ್ಠಾನದ ನೆರವಿನೊಂದಿಗೆ ಏಶಿಯನ್ ಕಾಲೇಜ್ ಆಫ್ ಜರ್ನಲಿಸಂ ಈ ಪ್ರಶಸ್ತಿಯನ್ನು ನೀಡುತ್ತಿದೆ.
ಈ ಪ್ರಶಸ್ತಿಯು ಟ್ರೋಫಿ,ಪ್ರಶಂಸಾ ಪತ್ರ ಹಾಗೂ 2 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ.
‘‘ಅರ್ಥಿಕ ವರದಿಗಾರಿಕೆಯ ಕ್ಷೇತ್ರದಲ್ಲಿ ತನಿಖಾ ಪತ್ರಿಕೋದ್ಯಮವು ಕೋಲ್ಗೇಟ್ 2.0 ವರದಿಯು ಒಂದು ದಿಟ್ಟ ಉದಾಹಣೆಯಾಗಿದೆ. ಬಹುತೇಕ ಮಂದಿಗೆ ತಿಳಿಯದೇ ಇದ್ದಂತಹ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ ಸತ್ಯವನ್ನು ಬಹಿರಂಗಪಡಿಸುವುದಕ್ಕಾಗಿ ನೂತನ ಪುರಾವೆಯನ್ನು ಸಂಗ್ರಹಿಲು ವ್ಯಾಪಕ ಸಂಶೋಧನೆಯೊಂದಿಗೆ ರಚಿಸಲಾದ ಈ ವರದಿಯು ತನಿಖಾ ಪತ್ರಿಕೋದ್ಯಮದ ಒಂದು ಘನವೆತ್ತ ಕೃತಿಯಾಗಿದೆ’’ ಎಂದು ತೀರ್ಪುಗಾರರು ಪ್ರಶಂಸಾ ಪತ್ರದಲ್ಲಿ ತಿಳಿಸಿದ್ದಾರೆ.
ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ, ಪತ್ರಕರ್ತೆ ನಿಲಿತಾ ವಚಾನಿ ಹಾಗೂ ಇತಿಹಾಸಕಾರ ಮತ್ತು ಲೇಖಕ ಎ.ಆರ್.ವೆಂಕಟಾಚಲಪತಿ ಅವರನ್ನೊಳಗೊಂಡ ತೀರ್ಪುಗಾರ ಮಂಡಳಿಯು ಅವಿರೋಧವಾಗಿ ನಿಲೀನಾ ಅವರ ವರದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸುಪ್ರೀಂಕೋರ್ಟ್ನ 2014 ಸೆಪ್ಟೆಂಬರ್ ತಿಂಗಳ ಐತಿಹಾಸಿಕ ತೀರ್ಪಿನ ಹೊರತಾಗಿಯೂ ಚತ್ತೀಸ್ಗಢದ ಕಲ್ಲಿದ್ದಲು ನಿಕ್ಷೇಪಗಳನ್ನು ಅದಾನಿ ಸಮೂಹಕ್ಕೆ ಸೇರಿದ ಕಂಪೆನಿಯ ಜಂಟಿ ಸಹಭಾಗಿತ್ವವಿರುವ ಯೋಜನೆಗಾಗಿ ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮಕ್ಕೆ ವಿತರಿಸುವಲ್ಲಿ ನಡೆದಿತ್ತೆನ್ನಲಾದ ಅವ್ಯಹಾರಗಳನ್ನು ಕೋಲ್ಗೇಟ್ 2.0 ವರದಿಯು ಬಯಲಿಗೆಳೆದಿತ್ತು. ಈ ವರದಿಯು ಪ್ರಕಟವಾದ ಬಳಿಕ ನ್ಯಾಯಾಲಯವು ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯನ್ನು ರದ್ದುಪಡಿಸಿತ್ತು. ದಿ ವೈರ್ ಪತ್ರಿಕೆಯಲ್ಲಿ ಪ್ರಕಟವಾದ ನೇಹಾ ದೀಕ್ಷಿತ್ ಬರೆದಿರುವ ‘ ದಿ ಕ್ರೋನಿಕಲ್ ಆಫ್ ಕ್ರೈಂ ಫಿಕ್ಷನ್ ದ್ಯಾಟ್ ಇಸ್ ಆದಿತ್ಯನಾಥ್ಸ್ ಎನ್ಕೌಂಟರ್ ರಾಜ್’ ೆ ಹಾಗೂ ದಿ ಕಾರಾವಾನ್ ಪತ್ರಿಕೆಯಲ್ಲಿ ಪ್ರಕಟವಾದ ‘ ದಿ ಡೆತ್ ಆಫ್ ಜಡ್ಜ್ ಲೋಯಾ’ ವರದಿಗಳಿಗೂ ವಿಶೇಷ ಪುರಸ್ಕಾರವನ್ನು ತೀರ್ಪುಗಾರ ಮಂಡಳಿ ಘೋಷಿಸಿದೆ.