ಎಲ್ಒಸಿಯಲ್ಲಿ ಉದ್ವಿಗ್ನತೆ ತಣಿಸಲು ಮುಂದೆ ಬನ್ನಿ: ಪಾಕಿಸ್ತಾನ
ಹೊಸದಿಲ್ಲಿ, ಮೇ 11: ಪುಲ್ವಾಮಾ ದಾಳಿ ಹಾಗೂ ಅನಂತರ ಭಾರತೀಯ ವಾಯು ಪಡೆ ನಡೆಸಿದ ಬಾಲಕೋಟ್ ವಾಯು ದಾಳಿಯಿಂದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ಸೇನಾ ಪಡೆಗಳ ನಡುವಿನ ಗಡಿ ಉದ್ವಿಗ್ನತೆ ತಣಿಸುವಂತೆ ಪಾಕಿಸ್ತಾನ ಭಾರತವನ್ನು ಆಗ್ರಹಿಸಿದೆ.
ರಾಜತಾಂತ್ರಿಕ ಮಾರ್ಗದಲ್ಲಿ ಸಂದೇಶ ರವಾನಿಸುವ ಮೂಲಕ ಗಡಿ ನಿಯಂತ್ರಣ ರೇಖೆಯಲ್ಲಿ ಸೇನಾ ಉದ್ವಿಗ್ನತೆ ತಣಿಸುವಂತೆ ಪಾಕಿಸ್ತಾನ ಸೇನೆ ಮನವಿ ಮಾಡಿದೆ ಈ ಬಗ್ಗೆ ಪಾಕಿಸ್ತಾನ ಎಪ್ರಿಲ್ ಮಧ್ಯಭಾಗದಲ್ಲಿ ಪತ್ರ ರವಾನಿಸಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಗಡಿ ನಿಯಂತ್ರಣ ರೇಖೆಯಿಂದ ತನ್ನ ಎಸ್ಎಸ್ಜಿಯ ಸಿಬ್ಬಂದಿಯನ್ನು ತೆರವುಗೊಳಿಸುವುದಾಗಿ ಪಾಕಿಸ್ತಾನ ವಾಗ್ದಾನ ನೀಡಿದೆ ಹಾಗೂ ಉಭಯ ಕಡೆಗಳಿಂದ ಪಿರಂಗಿ ದಾಳಿ ನಿಷೇಧಿಸುವಂತೆ ಸಲಹೆ ನೀಡಿದೆ ಎಂದು ಪ್ರದಾನಿ ಮಂತ್ರಿ ಕಚೇರಿಗೆ ಪಾಕಿಸ್ತಾನ ಕಳುಹಿಸಿದ ವರದಿ ತಿಳಿಸಿದೆ.
ಬಾಲಕೋಟ್ ವಾಯು ದಾಳಿ ಬಳಿಕ ‘‘ಮುನ್ನೆಚ್ಚರಿಕೆ ನಿಯೋಜನೆ’’ಯಾಗಿ ಪಾಕಿಸ್ತಾನ ತನ್ನ ವಿಶೇಷ ಪಡೆ ಹಾಗೂ ತುಕಡಿಗಳನ್ನು ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಿತ್ತು.
ಸೇನಾ ಹಾಗೂ ರಾಜತಾಂತ್ರಿಕ ಮಾರ್ಗದಲ್ಲಿ ಉಭಯ ರಾಷ್ಟ್ರಗಳು ಉದ್ವಿಗ್ನತೆ ತಣಿಸುವ ಪ್ರಸ್ತಾಪವನ್ನು ಪಾಕಿಸ್ತಾನ ಮುಂದುವರಿಸಲಿದೆ ಎಂದು ಭಾರತೀಯ ಸೇನೆ ಅಭಿಪ್ರಾಯ ವ್ಯಕ್ತಪಡಿಸಿದೆ.