ಬಿಜೆಪಿ – ಕಾಂಗ್ರೆಸ್ಸೇತರ ತೃತೀಯರಂಗದ ಸಾಧ್ಯತೆ ಬಗ್ಗೆ ಸ್ಟಾಲಿನ್ ಹೇಳಿದ್ದೇನು?
ಕುತೂಹಲ ಸೃಷ್ಟಿಸಿದ ಡಿಎಂಕೆ ಅಧ್ಯಕ್ಷರ ಹೇಳಿಕೆ
ಚೆನ್ನೈ, ಮೇ 14: ಲೋಕಸಭಾ ಚುನಾವಣೆಯ ಬಳಿಕ ದೇಶದಲ್ಲಿ ಬಿಜೆಪಿಯೇತರ ಅಥವಾ ಕಾಂಗ್ರೆಸೇತರ ತೃತೀಯ ರಂಗದ ಸ್ಥಾಪನೆಯ ಸಾಧ್ಯತೆ ಕಾಣಿಸುತ್ತಿಲ್ಲ ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಕಾಂಗ್ರೆಸೇತರ ಮತ್ತು ಬಿಜೆಪಿಯೇತರ ತೃತೀಯ ರಂಗ ಸ್ಥಾಪಿಸಲು ಒಲವು ಹೊಂದಿರುವ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಸೋಮವಾರ ಚೆನ್ನೈಗೆ ಆಗಮಿಸಿ ಸ್ಟಾಲಿನ್ ಜೊತೆ ಮಾತುಕತೆ ನಡೆಸಿದ್ದರು. ಇದರ ಮರುದಿನವೇ ಸ್ಟಾಲಿನ್ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.
ಕೆಸಿಆರ್ ತಮಿಳುನಾಡಿಗೆ ಬಂದಿರುವುದು ಇಲ್ಲಿಯ ದೇವಸ್ಥಾನಗಳಲ್ಲಿ ಹರಕೆ ತೀರಿಸಲು. ಹಾಗೆ ಬಂದವರು ನನಗೆ ಕರೆ ಮಾಡಿದ್ದು ಅವರನ್ನು ಭೇಟಿಯಾಗಿದ್ದೇನೆ. ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದೇವೆ. ತೃತೀಯ ರಂಗದ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಹೊರತಾದ ತೃತೀಯ ರಂಗದ ಕುರಿತ ಪ್ರಶ್ನೆಗೆ ಉತ್ತರಿಸಿದ ಸ್ಟಾಲಿನ್, ಈ ಕುರಿತ ಸಾಧ್ಯತೆ ಇದೆ ಎಂದು ನನಗನಿಸುವುದಿಲ್ಲ. ಏನಿದ್ದರೂ ಮೇ 23ರ ಬಳಿಕವಷ್ಟೇ ಈ ಕುರಿತು ನಿರ್ಧರಿಸಲಾಗುವುದು ಎಂದರು.