ರಾಹುಲ್ ಗಾಂಧಿ ಫಿರಂಗಿ, ನಾನು ಎ.ಕೆ. 47: ನವಜೋತ್ ಸಿಂಗ್ ಸಿಧು
ಬಿಲಾಸ್ಪುರ, ಮೇ 16: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫಿರಂಗಿ, ನಾನು ಎ.ಕೆ. 47 ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಹಿಮಾಚಲಪ್ರದೇಶದ ಬಿಲಾಸ್ಪುರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಸಿಧು, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗಂಗಾ ಪುತ್ರನಾಗಿದ್ದರು. ಆದರೆ, ಚುನಾವಣೆ ಬಳಿಕ ಅವರು ರಫೇಲ್ ಏಜೆಂಟ್ ಆಗಲಿದ್ದಾರೆ ಎಂದರು.
“ರಫೇಲ್ ಒಪ್ಪಂದದಲ್ಲಿ ನರೇಂದ್ರ ಮೋದಿ ಅವರು ದಲ್ಲಾಳಿಯಾಗಿದ್ದರೇ ಇಲ್ಲವೇ ಎಂಬುದನ್ನು ನಾನು ತಿಳಿಯ ಬಯಸುತ್ತೇನೆ. ರಾಹುಲ್ ಗಾಂಧಿ ಅವರು ಫಿರಂಗಿ, ನಾನು ಎ.ಕೆ. 47 ಎಂದು ಸಿಧು ಇಂದಿಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಹೇಳಿದರು. ನಾನು ಲಂಚ ತೆಗೆದುಕೊಳ್ಳುವುದಿಲ್ಲ, ಲಂಚ ತೆಗೆದುಕೊಳ್ಳಲು ಯಾರೊಬ್ಬರಿಗೂ ಬಿಡುವುದಿಲ್ಲ ಎಂಬ ನರೇಂದ್ರ ಮೋದಿ ಅವರ ನಿಲುವಿಗೆ ನಾನು ಸವಾಲೆಸೆಯುತ್ತೇನೆ. ಒಂದು ವೇಳೆ ನಾನು ಸೋತರೆ, ರಾಜಕೀಯ ತೊರೆಯುತ್ತೇನೆ. ನರೇಂದ್ರ ಮೋದಿ 2014ರಲ್ಲಿ ಗಂಗಾ ಪುತ್ರನಾಗಿ ಆಗಮಿಸಿದರು, 2019ರಲ್ಲಿ ಅವರು ರಫೇಲ್ ಏಜೆಂಟ್ ಆಗಲಿದ್ದಾರೆ” ಎಂದು ಅವರು ಹೇಳಿದರು. ಹಿಮಾಚಲ ಪ್ರದೇಶದ 4 ಲೋಕಸಭಾ ಸ್ಥಾನಗಳಿಗೆ ಮೇ 19ರಂದು ಚುನಾವಣೆ ನಡೆಯಲಿದೆ. ಮತ ಎಣಿಕೆ ಮೇ 23ರಂದು ನಡೆಯಲಿದೆ.