ಮಾಜಿ ಯೋಧ ತೇಜ್ ಬಹದ್ದೂರ್ ನಾಮಪತ್ರ ತಿರಸ್ಕಾರ ಪೂರ್ವ ನಿಯೋಜಿತ ಸಂಚು !
ಎಬಿಪಿ ನ್ಯೂಸ್ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗ
► ಇದಕ್ಕಾಗಿ 48 ಗಂಟೆ ಕೆಲಸ ಮಾಡಿದ್ದ ಚುನಾವಣಾ ವೀಕ್ಷಕ
ಹೊಸದಿಲ್ಲಿ, ಮೇ 20: ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮಾಜವಾದಿ ಪಕ್ಷವು ಕಣಕ್ಕಿಳಿಸಿದ್ದ ಗಡಿಭದ್ರತಾಪಡೆಯ ಉಚ್ಚಾಟಿತ ಯೋಧ ತೇಜ್ ಬಹದ್ದೂರ್ ಯಾದವ್ ಅವರ ನಾಮಪತ್ರವು ತಿರಸ್ಕೃತಗೊಳ್ಳುವಂತೆ ಮಾಡಲು ಸೂಕ್ತ ಮಾರ್ಗೋಪಾಯಗಳನ್ನು ಹುಡುಕಲೆಂದೇ ವಾರಣಾಸಿ ಲೋಕಸಭಾ ಕ್ಷೇತ್ರದ ವಿಶೇಷ ಚುನಾವಣಾ ನಿರೀಕ್ಷರೊಬ್ಬರು ಸುಮಾರು 48 ತಾಸುಗಳನ್ನು ವ್ಯಯಿಸಿ ದ್ದರೆಂದು ಎಬಿಪಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಎಬಿಪಿ ನ್ಯೂಸ್ ಸುದ್ದಿವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆ ವರದಿಯ ಪ್ರಕಾರ, ತಮಿಳುನಾಡು ಕೇಡರ್ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗವು ವಾರಣಾಸಿಯ ಚುನಾವಣಾ ವೀಕ್ಷಕರನ್ನಾಗಿ ನೇಮಿಸಿತ್ತು. ಎಬಿಪಿ ನ್ಯೂಸ್ ಸುದ್ದಿವಾಹಿನಿಯ ವರದಿ ಪ್ರಕಾರ, 1951ರ ಜನತಾ ಪ್ರಾತಿನಿಧಿತ್ವ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ, ತೇಜ್ಪ್ರತಾಪ್ ಯಾದವ್ಗೆ ಯಾವೆಲ್ಲಾ ಸೆಕ್ಷನ್ಗಳಡಿಯಲ್ಲಿ ನೋಟಿಸ್ಗಳನ್ನು ಕಳುಹಿಸಬಹುದೆಂಬುದನ್ನು ಕಂಡುಹಿಡಿಯಲು ತಾನು 48 ತಾಸುಗಳ ಕಾಲ ಚಿಂತನಮಂಥನದಲ್ಲಿ ತೊಡಗಬೇಕಾಯಿತು ಎಂದು ಕುಮಾರ್ ಹೇಳಿದ್ದಾರೆಂದು ವರದಿ ತಿಳಿಸಿದೆ.
ತೇಜ್ಬಹದ್ದೂರ್ ನಾಮಪತ್ರ ಸಲ್ಲಿಸಿದ ಬಳಿಕ ಅವರಿಗೆ ಚುನಾವಣಾ ಅಧಿಕಾರಿ ಸುರೇಂದ್ರ ಸಿಂಗ್ ಅವರು ಎರಡು ನೋಟಿಸ್ಗಳನ್ನು ನೀಡಿದ್ದರು. ಮೊದಲನೇ ನೋಟಿಸ್ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 19ಕ್ಕೆ ಸಂಬಂಧಿಸಿದ್ದಾಗಿತ್ತು. ಈ ನೋಟಿಸ್ ಪ್ರಕಾರ ಯಾವುದೇ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಅಧಿಕಾರಿಯು ಭ್ರಷ್ಟಾಚಾರ ಅಥವಾ ಅವಿಧೇಯತೆಯ ಕಾರಣಕ್ಕಾಗಿ ವಜಾಗೊಳಿಸಿದ್ದಲ್ಲಿ ಆತನನ್ನು ವಜಾಗೊಂಡ ದಿನಾಂಕದಿಂದ 5 ವರ್ಷಗಳ ಅವಧಿಗೆ ಚುನಾವಣೆಗೆ ಸ್ಪರ್ಧಿಸುವುದರಿಂದ ಅನರ್ಹಗೊಳಿಸಬಹುದಾಗಿದೆ. ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 9(2) ಪ್ರಕಾರ ಇಂತ ಪ್ರಕರಣಗಳಲ್ಲಿ ವ್ಯಕ್ತಿಯು ಸ್ಪರ್ಧಿಸಬೇಕಾದರೆ, ಆತ ಚುನಾವಣಾ ಆಯೋಗದಿಂದ ಪ್ರಮಾಣಪತ್ರವೊಂದನ್ನು ಪಡೆಯಬೇಕಾಗುತ್ತದೆ.
ಈ ಎರಡು ಸೆಕ್ಷನ್ಗಳು ಅವಿಧೇಯ ಹಾಗೂ ಭ್ರಷ್ಟಾಚಾರದ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದೆ. ಆಂತಹ ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಆದರೆ ತೇಜ್ ಬಹದ್ದೂರ್ ಅಶಿಸ್ತಿನ ಆಧಾರದಲ್ಲಿ ವಜಾಗೊಂಡಿರುವುದರಿಂದ ಅವರು ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲವೆಂದು ಅವರು ಹಾಗೂ ಅವರ ವಕೀಲರಾದ ರಾಜೇಶ್ ಗುಪ್ತಾ ತಿಳಿಸಿದ್ದಾರೆ.
ತಾನು ಭ್ರಷ್ಟಾಚಾರ ಹಾಗೂ ಅವಿಧೇಯತೆಗಾಗಿ ಬಿಎಸ್ಎಫ್ ಸೇವೆಯಿಂದ ವಜಾಗೊಂಡಿಲ್ಲವೆಂಬ ಬಗ್ಗೆ ಪ್ರಮಾಣಪತ್ರವೊಂದನ್ನು ಮೇ 1ರಂದು ಬೆಳಗ್ಗೆ 11:00 ಗಂಟೆಯೊಳಗೆ ಚುನಾವಣಾ ಆಯೋಗದಿಂದ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಯಾದವ್ಗೆ ಚುನಾವಣಾ ಅಧಿಕಾರಿ ಸೂಚಿಸಿದ್ದರು ಎಂದು ತೇಜ್ಬಹಾದ್ದೂರ್ ತಿಳಿಸಿದ್ದಾರೆ. ‘‘ಈ ಬಗ್ಗೆ ನೋಟಿಸೊಂದನ್ನು ಚುನಾವಣಾಧಿಕಾರಿ ಹಿಂದಿನ ದಿನದ ರವಿವಾರ ಸಂಜೆ 6:00 ಗಂಟೆಗೆ ನೀಡಿದ್ದರು. ಇಷ್ಟೊಂದು ಕಡಿಮೆ ಸಮಯದ ಅಂತರದಲ್ಲಿ ತಾನು ಹೇಗೆ ದಿಲ್ಲಿಗೆ ತೆರಳಿ, ಪ್ರಮಾಣಪತ್ರವನ್ನು ತರಲಿ. ಹೀಗಿದ್ದೂ ನನ್ನ ವಕೀಲರು ದಿಲ್ಲಿಗೆ ತೆರಳಿ ನಸುಕಿನಲ್ಲಿ 2:00 ಗಂಟೆಗೆ ದಿಲ್ಲಿ ತಲುಪಿದರು. ಅಲ್ಲಿ ಅವರಿಗೆ ಒಳಪ್ರವೇಶಿಸಲು ಬಿಡಲಿಲ್ಲ. ಕೊನೆಗೂ ಬೆಳಗ್ಗೆ 11:00 ಗಂಟೆ ಹೊತ್ತಿಗೆ ಅವರು ಒಳಪ್ರವೇಶಿಸುವಲ್ಲಿ ಸಫಲರಾದರು’’ ಎಂದು ಯಾದವ್ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸುವ ಅಧಿಕಾರ ಚುನಾವಣಾ ವೀಕ್ಷಕರಿಗೆ ಇರುವುದಿಲ್ಲ ಎಂದು ಹಿರಿಯ ಚುನಾವಣಾಧಿಕಾರಿ ಇಂದ್ರಭೂಷಣ್ ವರ್ಮಾ ಎಬಿಪಿ ನ್ಯೂಸ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಯಾದವ್ ಅವರ ನಾಮಪತ್ರವು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 9 ಹಾಗೂ 33(3) ಅನ್ನು ನಿಯಮಗಳಿಗೆ ಅನುಗುಣವಾಗಿರುವುದರಲ್ಲಿ ವಿಫಲವಾಗಿರುವುದರಿಂದ ಅವುಗಳನ್ನು ತಿರಸ್ಕರಿಸಿದ್ದಾಗಿ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುರೇಂದ್ರ ಸಿಂಗ್ ತಿಳಿಸಿದ್ದಾರೆ.
ತನ್ನ ನಾಮಪತ್ರವನ್ನು ತಿರಸ್ಕರಿಸಲು ಚುನಾವಣಾಧಿಕಾರಿಗಳು ಸಂಚು ಹೂಡಿದ್ದಾರೆಂದು ಯಾದವ್ ತಿಳಿಸಿದ್ದರು. ತನಗೆ ನೀಡಲಾದ ಮೊದಲ ನೋಟಿಸ್ಗೆ ಸಂಬಂಧಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ತನಗೆ ಎರಡನೇ ನೋಟಿಸ್ ನೀಡಲಾಯಿತೆಂದು ತೇಜ್ಬಹಾದ್ದೂರ್ ಆಪಾದಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ತೇಜ್ ಬಹದ್ದೂರ್ ಯಾದವ್ ಸ್ಪರ್ಧಿಸುವುದನ್ನು ತಡೆಯಲು ವ್ಯಾಪಕ ಪ್ರಯತ್ನಗಳನ್ನು ಮಾಡಲಾಗಿತ್ತೆಂಬುದನ್ನು ವಿಶೇಷ ಚುನಾವಣಾ ವೀಕ್ಷಕ ಕುಮಾರ್ ಅವರ ಹೇಳಿಕೆಗಳು ದೃಢೀಕರಿಸುತ್ತವೆ ಎಂದು ಯಾದವ್ ಹೇಳಿದ್ದಾರೆ.