ಜಮ್ಮು ಕಾಶ್ಮೀರ: ಮೆಹಬೂಬ ಮುಫ್ತಿಗೆ ಮುಖಭಂಗ
ಶ್ರೀನಗರ, ಮೇ 23: ಜಮ್ಮು ಕಾಶ್ಮೀರದಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ ಮೂರು ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಬಿಜೆಪಿ ಯಶಸ್ವಿಯಾಗಿದ್ದರೆ, ದಕ್ಷಿಣ ಕಾಶ್ಮೀರದ ಅನಂತ್ನಾಗ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ, ಟಿಡಿಪಿ ನಾಯಕಿ ಮೆಹಬೂಬ ಮುಫ್ತಿಗೆ ಭಾರೀ ಮುಖಭಂಗವಾಗಿದೆ.
ನ್ಯಾಷನಲ್ ಕಾನ್ಫರೆನ್ಸ್ಮ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗೆದ್ದವರಲ್ಲಿ ಪ್ರಮುಖರು. ಅನಂತ್ನಾಗ್ ಕ್ಷೇತ್ರದಲ್ಲಿ ಎನ್ಸಿ ಅಭ್ಯರ್ಥಿ, ಹೈಕೋರ್ಟ್ನ ಮಾಜಿ ನ್ಯಾಯಾಧೀಶ ಹಸ್ನೈನ್ ಮಸೂದಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿಯನ್ನು ಸೋಲಿಸಿದ್ದಾರೆ.
ಮಸೂದಿ ತನ್ನ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್ನ ಎ ಮೀರ್ರನ್ನು 6,676 ಮತಗಳ ಅಂತರದಿಂದ ಸೋಲಿಸಿದ್ದಾರೆ. ಮೆಹಬೂಬ ಇಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಉಧಾಂಪುರ ಕ್ಷೇತ್ರದಲ್ಲಿ ಜಿತೇಂದ್ರ ಸಿಂಗ್ ಕಾಂಗ್ರೆಸ್ನ ವಿಕ್ರಮಾದಿತ್ಯ ಸಿಂಗ್ರನ್ನು 3.49 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಜಮ್ಮು ಕ್ಷೇತ್ರದಲ್ಲಿ ಬಿಜೆಪಿಯ ಜುಗಲ್ ಕಿಶೋರ್ ಜಯ ಸಾಧಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ , 83 ವರ್ಷದ ಫಾರೂಕ್ ಅಬ್ದುಲ್ಲಾ ಶ್ರೀನಗರ ಕ್ಷೇತ್ರದಲ್ಲಿ ಚಲಾವಣೆಯಾದ 1.82 ಲಕ್ಷ ಮತಗಳಲ್ಲಿ 70,050 ಮತಗಳನ್ನು ಗಳಿಸಿ ನಾಲ್ಕನೇ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ.
ಲಡಾಕ್ ಕ್ಷೇತ್ರದಲ್ಲಿ ಬಿಜೆಪಿಯ ಜೆಟಿ ನಂಗ್ಯಾಲ್ ಸ್ವತಂತ್ರ ಅಭ್ಯರ್ಥಿ ಸಜ್ಜಾದ್ ಹುಸೈನ್ ವಿರುದ್ಧ ಜಯ ಸಾಧಿಸಿದ್ದಾರೆ. ಬಾರಾಮುಲ್ಲಾ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ನ ಮುಹಮ್ಮದ್ ಅಕ್ಬರ್ ಲೋನ್ ಜಯ ಸಾಧಿಸಿದ್ದಾರೆ. 2014ರ ಚುನಾವಣೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮತ್ತು ಟಿಡಿಪಿ ತಲಾ ಮೂರು ಸ್ಥಾನದಲ್ಲಿ ಜಯ ಸಾಧಿಸಿತ್ತು.