ಒಂದು ತಿಂಗಳ ಕಾಲ ಟಿವಿ ಚಾನಲ್ ಗಳಲ್ಲಿ ಕಾಂಗ್ರೆಸ್ ವಕ್ತಾರರು ಭಾಗವಹಿಸುವುದಿಲ್ಲ: ಸುರ್ಜೆವಾಲಾ
ಹೊಸದಿಲ್ಲಿ, ಮೇ 30: ಕಳೆದ ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ಆಘಾತದಿಂದ ಇನ್ನೂ ಚೇತರಿಸಿಕೊಳ್ಳದಿರುವ ಕಾಂಗ್ರೆಸ್ ಪಕ್ಷ ಟಿವಿ ಚಾನೆಲ್ ಗಳಲ್ಲಿ ನಡೆಯುವ ಚರ್ಚಾಗೋಷ್ಠಿಗಳಲ್ಲಿ ಒಂದು ತಿಂಗಳುಗಳ ತನ್ನ ವಕ್ತಾರರನ್ನು ಅಥವಾ ಪ್ರತಿನಿಧಿಗಳನ್ನು ಕಳುಹಿಸದಿರಲು ನಿರ್ಧರಿಸಿದೆ.
ಕಾಂಗ್ರೆಸ್ ಪಕ್ಷದ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವಿಟರ್ ನಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.
ಕಾಂಗ್ರೆಸ್ ಪ್ರತಿನಿಧಿಗಳನ್ನು ಟಿವಿ ಕಚೇರಿಗಳಿಗೆ ಒಂದು ತಿಂಗಳ ಕಾಲ ಆಹ್ವಾನಿಸದಂತೆ ಮೀಡಿಯಾ ಚಾನಲ್ ಗಳನ್ನು ವಿನಂತಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅನುಭವಿಸಿದ ಸೋಲಿಗೆ ಕಾರಣ ಕಂಡು ಹುಡುಕುವ ಪ್ರಯತ್ನ ಹೈಕಮಾಂಡ್ ನಿಂದ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಸ್ಥಿತಿ ಶೋಚನೀಯವಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಲಿನ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರವನ್ನು ಬದಲಿಸುವಂತೆ ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರೂ, ರಾಹುಲ್ ಗಾಂಧಿ ತನ್ನ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಿಲ್ಲ.