ಪತಿಯ ಹಿಂಸೆಯಿಂದ ಬೇಸತ್ತು ಆತನನ್ನು ಕೊಂದು ರುಂಡದೊಂದಿಗೆ ಠಾಣೆಗೆ ಆಗಮಿಸಿದ ಮಹಿಳೆ
ಲಖೀಂಪುರ್ : ಹಲವು ವರ್ಷಗಳಿಂದ ಪತಿ ನಡೆಸುತ್ತಿದ್ದ ದೈಹಿಕ ಹಾಗೂ ಮಾನಸಿಕ ಹಿಂಸೆಯಿಂದ ಬೇಸತ್ತು ಅಸ್ಸಾಂನ ಲಖೀಂಪುರ್ ಜಿಲ್ಲೆಯ ಮಝಗಾಂವ್ ಎಂಬ ಗ್ರಾಮದ ಮಹಿಳೆಯೊಬ್ಬಳು ಪತಿಯನ್ನು ಕೊಂದು ಆತನ ರುಂಡದೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದ್ದಾಳೆ.
ಘಟನೆ ಮಂಗಳವಾರ ರಾತ್ರಿ ನಡೆದಿತ್ತು. ಆಕೆ ಪ್ಲಾಸ್ಟಿಕ್ ಚೀಲದಲ್ಲಿ ತನ್ನ ಪತಿಯ ರುಂಡದೊಂದಿಗೆ ಧಾಲ್ಪುರ್ ಠಾಣೆಗೆ ಆಗಮಿಸಿದಾಗ ಅಲ್ಲಿನ ಪೊಲೀಸರೇ ದಂಗಾಗಿ ಹೋಗಿದ್ದರು.
ಗುಣೇಶ್ವರಿ ಬರ್ಕಟಕಿ (48) ಎಂಬ ಹೆಸರಿನ ಈ ಮಹಿಳೆ ತನ್ನ ಪತಿ ಮುಧೀರಾಂ (55) ಎಂಬಾತನನ್ನು ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
''ಆತ ಕಳೆದ ಹಲವಾರು ವರ್ಷಗಳಿಂದ ನನಗೆ ಹೊಡೆಯುತ್ತಿದ್ದ. ಹಲವು ಬಾರಿ ಕೊಡಲಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದ. ಆತನನ್ನು ಬಿಟ್ಟು ಹೋಗಲು ಹಲವು ಬಾರಿ ಯೋಚಿಸಿದ್ದರೂ ಮಕ್ಕಳನ್ನು ನೆನೆದು ಹಾಗೆ ಮಾಡಿರಲಿಲ್ಲ,. ಆದರೆ ಸಹಿಸಲಸಾಧ್ಯವಾದಾಗ ಹೀಗೆ ಮಾಡಿದೆ, ಇಲ್ಲದೇ ಹೋಗಿದ್ದರೆ ಆತ ನನ್ನನ್ನು ಸಾಯಿಸುತ್ತಿದ್ದ'' ಎಂದು ಆಕೆ ಹೇಳಿದ್ದಾಳೆ.
ಇಬ್ಬರು ಪುತ್ರರು ಹಾಗೂ ಮೂವರು ಪತ್ರಿಯರೂ ಸೇರಿದಂತೆ ಐದು ಮಕ್ಕಳ ತಾಯಿಯಾಗಿರುವ ಈಕೆ ತನ್ನ ಪತಿಯ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಸುಮಾರು 5 ಕಿಮೀ ದೂರದ ಪೊಲೀಸ್ ಠಾಣೆಯ ತನಕ ಪತಿಯ ರುಂಡದೊಂದಿಗೆ ನಡೆದೇ ಆಗಮಿಸಿದ್ದಳು.
ಆರೋಪಿ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.