ಬಿಜೆಪಿ ವಿರುದ್ಧ ಪ್ರತಿ ದಿನ ಸೆಣಸಾಡಲು ನಮ್ಮ 52 ಸಂಸದರು ಸಾಕು: ರಾಹುಲ್
ಹೊಸದಿಲ್ಲಿ, ಜೂ.1: ಚುನಾವಣೆಯಲ್ಲಿ ಸೋಲಿನ ಹೊರತಾಗಿಯೂ ಕಾಂಗ್ರೆಸ್ ಪಕ್ಷ ಪ್ರತಿ ದಿನ ಬಿಜೆಪಿಯ ವಿರುದ್ಧ ಸೆಣಸಾಡುವುದನ್ನು ಮುಂದುವರಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂದಿ ಹೇಳಿದ್ದಾರೆ.
``ನಾವು 52 ಮಂದಿ ಎಂಪಿಗಳಿದ್ದೇವೆ. ಬಿಜೆಪಿ ವಿರುದ್ಧ ಪ್ರತಿ ಇಂಚು ಹೋರಾಟವನ್ನು ಈ 52 ಎಂಪಿಗಳು ನಡೆಸಲಿದ್ದಾರೆಂದು ನಾನು ನಿಮಗೆ ಖಾತರಿ ನೀಡಬಲ್ಲೆ, ಬಿಜೆಪಿ ಪ್ರತಿ ದಿನ ನೆಗೆಯುವಂತಾಗಲು ನಾವೇ ಸಾಕು'' ಎಂದು ಶನಿವಾರ ಇಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಹೇಳಿದರು.
“ಕಳೆದ ಬಾರಿ ನಾವು 44 ಮಂದಿ ಲೋಕಸಭೆಯಲ್ಲಿದ್ದೆವು ಹಾಗೂ ಬಿಜೆಪಿ ವಿರುದ್ಧ ಹೋರಾಡಿದ್ದೆವು, ಈ ಬಾರಿ ನಾವು 52 ಮಂದಿ ಇದ್ದೇವೆ ಹಾಗೂ ಪ್ರತಿ ದಿನ ಬಿಜೆಪಿಯ ವಿರುದ್ಧ ಹೋರಾಡುತ್ತೇವೆ'' ಎಂದು ಪಕ್ಷದ ನೂತನ ಸಂಸದರನ್ನುದ್ದೇಶಿಸಿ ರಾಹುಲ್ ತಿಳಿಸಿದರು.
“ಪ್ರತಿಯೊಬ್ಬ ಕಾಂಗ್ರೆಸ್ ಸಂಸದನೂ ತಾನು ಸಂವಿಧಾನಕ್ಕಾಗಿ, ಯಾವುದೇ ಬೇಧಭಾವವಿಲ್ಲದೆ ಪ್ರತಿಯೊಬ್ಬ ಭಾರತೀಯನಿಗಾಗಿ ಹೋರಾಡುತ್ತಿದ್ದೇನೆ ಎಂಬುದನ್ನು ಮರೆಯಬಾರದು'' ಎಂದು ರಾಹುಲ್ ಹೇಳಿದ್ದಾರೆಂದು ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಎಲ್ಲಾ ರಾಜ್ಯಸಭಾ ಮತ್ತು ಲೋಕಸಭಾ ಸಂಸದರು ಭಾಗವಹಿಸಿದ್ದ ಸಭೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯನ್ನಾಗಿ ಆರಿಸಲಾಯಿತು.