ಎನ್ಡಿಎ ಒಡಕು: ಶುಭಾಶಯ ವಿನಿಮಯ ಮಾಡಿಕೊಳ್ಳದ ಬಿಹಾರ ಸಿಎಂ- ಡಿಸಿಎಂ !
ಪಾಟ್ನಾ: ಬಿಹಾರ ಎನ್ಡಿಎ ಮೈತ್ರಿಕೂಟದಲ್ಲಿ ಒಡಕು ಮತ್ತಷ್ಟು ಬಲವಾಗಿದ್ದು, ಎಲ್ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳದೇ ಇದ್ದುದು ಚರ್ಚೆಗೆ ಗ್ರಾಸವಾಗಿದೆ.
ಇಫ್ತಾರ್ ಕೂಟದಲ್ಲಿ ಇಬ್ಬರೂ ಗಣ್ಯರು ಭಾಗವಹಿಸಿದ್ದರು. ಆದರೆ ಇಬ್ಬರ ನಡುವೆಯೂ ಗಾಢ ಮೌನ ಗೋಡೆ ಕಟ್ಟಿತ್ತು. ಉಭಯ ಮುಖಂಡರ ಜತೆ ಪಾಸ್ವಾನ್ ಮಾತನಾಡುತ್ತಿದ್ದರು. ಆದರೆ ಸಿಎಂ ಹಾಗೂ ಡಿಸಿಎಂ ಪರಸ್ಪರ ಮಾತನಾಡಿಕೊಳ್ಳಲಿಲ್ಲ ಎನ್ನಲಾಗಿದೆ.
ಇಫ್ತಾರ್ನಿಂದ ಹೊರಡಲು ಅನುವಾದ ನಿತೀಶ್ ಕುಮಾರ್ ಪ್ರತಿಯೊಬ್ಬರ ಕೈ ಕುಲುಕಿದರು. ಆದರೆ ಪಕ್ಕದಲ್ಲೇ ಇದ್ದ ಸುಶೀಲ್ ಕುಮಾರ್ ಅವರತ್ತ ತಿರುಗಿ ನೋಡಲೂ ಇಲ್ಲ. ನಿತೀಶ್ ಹೊರಡುವಾಗ ಶಿಷ್ಟಾಚಾರದ ಕ್ರಮವಾಗಿ ಸುಶೀಲ್ ಕುಮಾರ್ ತಮ್ಮ ಆಸನದಿಂದ ಎತ್ತುನಿಂತಾಗ ಕೂಡಾ ಮುಖ್ಯಮಂತ್ರಿ ತಮ್ಮ ಸಹೋದ್ಯೋಗಿಯತ್ತ ಸೌಜನ್ಯದ ನಗೆಯನ್ನೂ ಬೀರದಿರುವುದು ವದಂತಿ ಹಬ್ಬಲು ಕಾರಣವಾಗಿದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಯನ್ನು ನಿತೀಶ್ ಕಡೆಗಣಿಸಿದ ಬಳಿಕ ಉಭಯ ಪಕ್ಷಗಳ ನಡುವಿನ ಕಂದಕ ಮತ್ತಷ್ಟು ಹೆಚ್ಚಿದೆ ಎಂದು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಮುಖಂಡರೊಬ್ಬರು ಸ್ಪಷ್ಟಪಡಿಸಿದರು.