ಮಗನ ಸೋಲಿಗೆ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೊಣೆ ಹೊರಬೇಕು: ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್
ಜೈಪುರ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಒಳ ಜಗಳ, ಆಂತರಿಕ ಕಲಹ ಮತ್ತಷ್ಟು ಉಲ್ಬಣಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಭದ್ರಕೋಟೆ ಎನಿಸಿದ ಜೋಧಪುರದಲ್ಲಿ ವೈಭವ್ ಗೆಹ್ಲೋಟ್ ಸೋಲಿಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೊಣೆ ಹೊರಬೇಕು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿಕೆ ನೀಡಿದ್ದಾರೆ.
ಗೆಹ್ಲೋಟ್ ಹೇಳಿಕೆಗೆ ಸಚಿನ್ ಅಚ್ಚರಿ ವ್ಯಕ್ತಪಡಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಎಬಿಪಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ, ಜೋಧಪುರ ಕ್ಷೇತ್ರಕ್ಕೆ ವೈಭವ್ ಹೆಸರನ್ನು ಸಚಿನ್ ಶಿಫಾರಸ್ಸು ಮಾಡಿದ್ದು ನಿಜವೇ ಎಂದು ಪ್ರಶ್ನಿಸಿದಾಗ, "ಅವರು ಹಾಗೆ ಹೇಳಿದ್ದರೆ ಅದು ಒಳ್ಳೆಯದು" ಎಂದು ಗೆಹ್ಲೋಟ್ ಪ್ರತಿಕ್ರಿಯಿಸಿದರು.
"ನಾವು ಜೋಧಪುರ ಕ್ಷೇತ್ರವನ್ನು ದೊಡ್ಡ ಅಂತರದಿಂದ ಗೆಲ್ಲುತ್ತೇವೆ ಎಂದು ಪೈಲಟ್ ಹೇಳಿದ್ದರು. ಏಕೆಂದರೆ ಅಲ್ಲಿ ಆರು ಮಂದಿ ಕಾಂಗ್ರೆಸ್ ಶಾಸಕರಿದ್ದಾರೆ. ನಮ್ಮ ಪ್ರಚಾರ ಅದ್ಭುತವಾಗಿತ್ತು. ಆದ್ದರಿಂದ ಕನಿಷ್ಠ ಅಲ್ಲಾದರೂ ಸೋಲಿನ ಹೊಣೆಯನ್ನು ಸಚಿನ್ ಹೊರಬೇಕು. ಅಲ್ಲಿ ಏಕೆ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಬಗ್ಗೆ ಸಮಗ್ರ ವಿಶ್ಲೇಷಣೆ ನಡೆಯಬೇಕು" ಎಂದು ಹೇಳಿದರು.