ಕೇರಳ,ಲಕ್ಷದ್ವೀಪ ಮತ್ತು ಕರ್ನಾಟಕಗಳಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ
ಹೊಸದಿಲ್ಲಿ,ಜೂ.9: ಅರಬ್ಬಿ ಸಮುದ್ರದಲ್ಲಿ ಲಕ್ಷದ್ವೀಪದ ಸಮೀಪ ನಿಮ್ನ ಒತ್ತಡ ರೂಪುಗೊಂಡಿದ್ದು,ಮುಂದಿನ 48 ಗಂಟೆಗಳಲ್ಲಿ ಆಗ್ನೇಯ ಮತ್ತು ನೆರೆಯ ಪೂರ್ವ-ಮಧ್ಯ ಅರಬ್ಬಿ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ರವಿವಾರ ತಿಳಿಸಿದೆ. ಅದು ಉತ್ತರ-ವಾಯುವ್ಯದತ್ತ ಸಾಗುವ ಮತ್ತು ನಂತರದ 24 ಗಂಟೆಗಳಲ್ಲಿ ಇನ್ನಷ್ಟು ತೀವ್ರಗೊಂಡು ಚಂಡಮಾರುತ ವುಂಟಾಗುವ ಸಾಧ್ಯತೆಯಿದೆ ಎಂದೂ ಅದು ಎಚ್ಚರಿಕೆ ನೀಡಿದೆ.
ಕೇರಳ,ಲಕ್ಷದ್ವೀಪ ಮತ್ತು ಕರ್ನಾಟಕಗಳಲ್ಲಿ ರವಿವಾರ ಮತ್ತು ಸೋಮವಾರ ಅಲ್ಲಲ್ಲಿ ವ್ಯಾಪಕ ಮಳೆಯಾಗಲಿದೆ ಎಂದಿರುವ ಐಎಂಡಿ,ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಪ್ರತಿ ಗಂಟೆಗೆ 35ರಿಂದ 45 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ ಎಂದಿದೆ.
ತನ್ಮಧ್ಯೆ ದಕ್ಷಿಣ ಅರಬ್ಬಿ ಸಮುದ್ರ,ಲಕ್ಷದ್ವೀಪದ ಹೆಚ್ಚಿನ ಭಾಗಗಳಲ್ಲಿ ಹಾಗೂ ಕೇರಳ ಮತ್ತು ದಕ್ಷಿಣ ತಮಿಳುನಾಡಿನ ಕೆಲವು ಭಾಗಗಳಲ್ಲಿ ಮಳೆ ಮಾರುತಗಳು ಮುನ್ನಡೆದಿವೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
Next Story