ಡಾ. ರಾಮ್ ಪುನಿಯಾನಿಗೆ ಬೆದರಿಕೆ ಕರೆ: ನಾಗರಿಕ ಸಂಘಟನೆಗಳ ಖಂಡನೆ
ಹೊಸದಿಲ್ಲಿ, ಜೂ. 9: ಸಾಮಾಜಿಕ ಹೋರಾಟಗಾರ ರಾಮ ಪುನಿಯಾನಿ ಅವರು ಜೂನ್ 6ರಂದು ಅಪರಿಚಿತ ದುಷ್ಕರ್ಮಿಗಳಿಂದ ಬೆದರಿಕೆ ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತದ ನಾಗರಿಕ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಆಘಾತ ಹಾಗೂ ಆತಂಕ ವ್ಯಕ್ತಪಡಿಸಿದ್ದಾರೆ.
ಜೂನ್ 6ರಂದು ಕರೆ ಮಾಡಿದ ಅಪರಿಚಿತ ದುಷ್ಕರ್ಮಿಗಳು ಡಾ. ಪುನಿಯಾನಿ ವಿರುದ್ಧ ನಿಂದನಾತ್ಮಕ ಭಾಷೆ ಬಳಸಿದ್ದಾರೆ. 15 ದಿನಗಳ ಒಳಗೆ ತೆರಳುವಂತೆ ಎಚ್ಚರಿಸಿದ್ದಾರೆ. ಇಲ್ಲದೇ ಇದ್ದರೇ ಘೋರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆ ಒಡ್ಡಿದ್ದಾರೆ.
ಕೆಲವು ತಿಂಗಳ ಹಿಂದೆ ಪಾಸ್ ಪೋರ್ಟ್ ಅರ್ಜಿಯ ವಿಚಾರಣೆ ನಡೆಸುವ ಅಧಿಕಾರಿಗಳ ಸೋಗಿನಲ್ಲಿ ಮೂವರು ಅಪರಿಚಿತರು ಪುನಿಯಾನಿ ಅವರ ಮನೆಗೆ ಭೇಟಿ ನೀಡಿದ್ದರು ಹಾಗೂ ಕೆಲವು ವೈಯುಕ್ತಿಕ ಮಾಹಿತಿ ಪಡೆದಿದ್ದರು. ಆದರೆ, ಪುನಿಯಾನಿ ಅವರು ಯಾವುದೇ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿರಲಿಲ್ಲ.
ಬೆದರಿಕೆ ಕರೆಯನ್ನು ಖಂಡಿಸಿರುವ ನಾಗರಿಕ ಸಂಘಟನೆಗಳ ಸದಸ್ಯರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ, ಈ ಪುನಾರಾವರ್ತಿತ ಬೆದರಿಕೆ ಜಾತ್ಯತೀತತೆಯ ಧ್ವನಿ ಹಾಗೂ ಕೋಮು ಸೌಹಾರ್ದ ಪ್ರತಿಪಾದಿಸುತ್ತಿರುವ ಪುನಿಯಾನಿ ಅವರ ಜೀವಕ್ಕೆ ಅಪಾಯ ಒಡ್ಡಿದೆ ಎಂದಿದ್ದಾರೆ.
ಇದು ಅವರ ಧ್ವನಿಯನ್ನು ವೌನವಾಗಿಸುವ ಹಾಗೂ ಶಾಂತಿ, ಸೌಹಾರ್ದದ ಸಂದೇಶ ಪಸರಿಸುವುದನ್ನು ನಿಯಂತ್ರಿಸುವ ಪ್ರಯತ್ನವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸದಸ್ಯರು ತಿಳಿಸಿದ್ದಾರೆ.