ಪ.ಬಂಗಾಳದಲ್ಲಿ ಹಿಂಸೆಯನ್ನು ಪ್ರಚೋದಿಸಲು ಕೇಂದ್ರ,ಬಿಜೆಪಿ ಯತ್ನ: ಮಮತಾ ಆರೋಪ
“ಸುಳ್ಳು ಸುದ್ದಿ ಹರಡಲು ಕೋಟ್ಯಾಂತರ ರೂ. ಖರ್ಚು”
ಕೋಲ್ಕತಾ,ಜೂ.10: ಕೇಂದ್ರ ಮತ್ತು ಬಿಜೆಪಿ ಕಾರ್ಯಕರ್ತರು ರಾಜ್ಯದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ತನ್ನ ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಇಲ್ಲಿ ಆರೋಪಿಸಿದರು.
ದೇಶದಲ್ಲಿ ಬಿಜೆಪಿಯನ್ನು ಪ್ರತಿಭಟಿಸುತ್ತಿರುವ ಏಕೈಕ ವ್ಯಕ್ತಿ ತಾನಾಗಿರುವುದರಿಂದ ಅವರು ತನ್ನ ಧ್ವನಿಯನ್ನು ಉಡುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಅವರು ಹೇಳಿದರು.
ರಾಜ್ಯ ಸಚಿವಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ,ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳನ್ನು ಹರಡಲು ಅವರು(ಬಿಜೆಪಿ) ಕೋಟಿಗಟ್ಟಲೆ ರೂ.ಗಳನ್ನು ವ್ಯಯಿಸುತ್ತಿದ್ದಾರೆ. ಯಾವುದೇ ರಾಜ್ಯಲ್ಲಿ ಹಿಂಸಾಚಾರ ಅಥವಾ ದಂಗೆ ನಡೆದರೆ ರಾಜ್ಯ ಸರಕಾರಗಳಷ್ಟೇ ಜವಾಬ್ದಾರಿ ಕೇಂದ್ರ ಸರಕಾರಕ್ಕೂ ಇದೆ. ಯಾವುದೇ ರಾಜ್ಯದಲ್ಲಿ ದಂಗೆ,ಹಿಂಸಾಚಾರ ನಡೆದರೆ ಅದು ತನ್ನ ಹೊಣೆಗಾರಿಕೆಯಿಂದ ಕಳಚಿಕೊಳ್ಳುವಂತಿಲ್ಲ ಎಂದರು.
ಕೇಂದ್ರ ಮತ್ತು ಬಿಜೆಪಿ ತನ್ನ ಸರಕಾರವನ್ನು ಉರುಳಿಸಲು ಪಿತೂರಿ ನಡೆಸುತ್ತಿವೆ. ಇದೇ ಕಾರಣದಿಂದ ಹತ್ಯೆಗಳ ಹಿನ್ನೆಲೆಯಲ್ಲಿ ಕೇಂದ್ರವು ತನ್ನ ಸರಕಾರಕ್ಕೆ ಸಲಹಾಪತ್ರವನ್ನು ರವಾನಿಸಿದೆ. ಮುಖ್ಯ ಕಾರ್ಯದರ್ಶಿಗಳು ಈಗಾಗಲೇ ಅದಕ್ಕೆ ಉತ್ತರಿಸಿದ್ದಾರೆ,ಹೀಗಾಗಿ ತಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.