ಪಶ್ಚಿಮ ಬಂಗಾಳದಲ್ಲಿ ನಿಲ್ಲದ ರಾಜಕೀಯ ಹಿಂಸಾಚಾರ
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸೆ ಮುಂದುವರಿದಿದ್ದು, ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತನೊಬ್ಬನ ಶವ ಮರದಲ್ಲಿ ನೇತಾಡುವ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ. ಇದರೊಂದಿಗೆ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವಿನ ಸಂಘರ್ಷ ತಾರಕಕ್ಕೇರಿದೆ.
ಬಿಜೆಪಿ ಕಾರ್ಯಕರ್ತ ಸಮಾತುಲ್ ದೊಲೂಯಿ ಎಂಬಾತನ ಮೃತ ದೇಹ ಹೌರಾದ ಸರ್ಪೋತಾ ಗ್ರಾಮದ ಪಕ್ಕದ ಹೊಲವೊಂದರಲ್ಲಿ ಮರದಲ್ಲಿ ನೇತಾಡುತ್ತಿತ್ತು. ಈ ಹತ್ಯೆಗೆ ತೃಣಮೂಲ ಕಾಂಗ್ರೆಸ್ ಕಾರಣ ಎಂದು ದೊಲೂಯಿ ಕುಟುಂಬ ಆಪಾದಿಸಿದೆ. ಬಿಜೆಪಿಯಲ್ಲಿ ದೊಲೂಯಿ ಸಕ್ರಿಯರಾಗಿದ್ದರು ಹಾಗೂ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತಗಟ್ಟೆಯಿಂದ ಪಕ್ಷಕ್ಕೆ ಮುನ್ನಡೆ ದೊರಕಿಸಿಕೊಟ್ಟಿದ್ದರು.
ಲೋಕಸಭಾ ಚುನಾವಣೆ ಬಳಿಕ ಜೈ ಶ್ರೀರಾಮ್ ರ್ಯಾಲಿಯನ್ನು ಸ್ಥಳೀಯವಾಗಿ ನಡೆಸಿದ ಬಳಿಕ ಆತನಿಗೆ ಜೀವ ಬೆದರಿಕೆ ಇತ್ತು.
ತೃಣಮೂಲ ಬೆಂಬಲದ ಸಮಾಜ ಘಾತುಕ ಶಕ್ತಿಗಳು ಚುನಾವಣೆಯ ಬಳಿಕ ಅವರ ಮನೆಯನ್ನು ಧ್ವಂಸಗೊಳಿಸಿದ್ದರು ಎಂದು ಬಿಜೆಪಿಯ ಹೌರಾ ಗ್ರಾಮೀಣ ಘಟಕದ ಅಧ್ಯಕ್ಷ ಅನುಪಮ್ ಮಲಿಕ್ ಹೇಳಿದ್ದಾರೆ.