ಚುನಾವಣೆಗಳಲ್ಲಿ ಇವಿಎಂ ಬಳಕೆ ಕುರಿತು ಜನಾಭಿಪ್ರಾಯ ಸಂಗ್ರಹಕ್ಕೆ ಮೊಯ್ಲಿ ಆಗ್ರಹ
ಹೊಸದಿಲ್ಲಿ,ಜೂ.17: ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳ ಕುರಿತು ಗಂಭೀರ ಶಂಕೆಗಳಿದ್ದು,ಚುನಾವಣೆಗಳಲ್ಲಿ ಅದನ್ನು ಬಳಸಬೇಕೇ ಅಥವಾ ಮತಪತ್ರಗಳಿಗೆ ಮರಳಬೇಕೇ ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹವನ್ನು ನಡೆಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಅವರು ಆಗ್ರಹಿಸಿದ್ದಾರೆ.
ಇವಿಎಮ್ಗಳ ಬಗ್ಗೆ ವಿಶ್ವಾಸದ ಕೊರತೆಯಿದೆ,ಹೀಗಾಗಿ ಜನಾಭಿಪ್ರಾಯ ಸಂಗ್ರಹವನ್ನು ಮತಪತ್ರಗಳ ಮೂಲಕ ನಡೆಸಬೇಕೇ ವಿನಃ ಇವಿಎಮ್ಗಳನ್ನು ಬಳಸಬಾರದು ಎಂದು ಅವರು ಒತ್ತಿ ಹೇಳಿದ್ದಾರೆ.
ಪ್ರತಿಯೊಬ್ಬರೂ ಇವಿಎಮ್ಗಳನ್ನು ಶಂಕಿಸುತ್ತಿದ್ದಾರೆ. ಇದೊಂದು ಗಂಭೀರ ವಿಷಯವಾಗಿದೆ ಮತ್ತು ಇವಿಎಂ ಕುರಿತು ಗಂಭೀರ ಶಂಕೆಗಳಿವೆ. ಅಮೆರಿಕದಂತಹ ಹಲವಾರು ರಾಷ್ಟ್ರಗಳು ಇವಿಎಮ್ಗಳ ಬಳಕೆಯ ಬಳಿಕ ಮತ್ತೆ ಮತಪತ್ರಗಳ ಹಿಂದಿನ ಪದ್ಧತಿಗೇ ಮರಳಿವೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮೊಯ್ಲಿ ಹೇಳಿದರು.
ಗಂಭೀರ ಶಂಕೆಗಳಿದ್ದಾಗ ಚುನಾವಣಾ ಆಯೋಗ ಮತ್ತು ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಮತಪತ್ರಗಳಿಗೆ ಮರಳಬೇಕು ಎಂದ ಅವರು,ಚುನಾವಣಾ ಪ್ರಕ್ರಿಯೆಯ ಬಗ್ಗೆ ಎತ್ತಲಾಗಿದ್ದ ಶಂಕೆಗಳನ್ನು ನಿವಾರಿಸಲು ಏನನ್ನೂ ಮಾಡದ ಚುನಾವಣಾ ಆಯೋಗದ ನಡವಳಿಕೆಯೇ ಶಂಕಾಸ್ಪದವಾಗಿದೆ ಎಂದರು.
ಕಾಂಗ್ರೆಸ್ ಪಕ್ಷವೇಕೆ ಇವಿಎಂ ವಂಚನೆ ಆರೋಪದ ಬಗ್ಗೆ ಬಲವಾಗಿ ಧ್ವನಿಯನ್ನೇಕೆ ಎತ್ತುತ್ತಿಲ್ಲ ಎಂಬ ಪ್ರಶ್ನೆಗೆ ಮೊಯ್ಲಿ, ಚುನಾವಣೆಗಳ ಸಂದರ್ಭದಲ್ಲಿಯೂ ಕಾಂಗ್ರೆಸ್ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರಿಕೊಂಡಿತ್ತು. ಅದು ತನ್ನ ಪರಾಭವಕ್ಕೆ ಇವಿಎಂ ವಿವಾದವನ್ನು ಸಮರ್ಥನೆಯನ್ನಾಗಿ ಪರಿಗಣಿಸಬಾರದು ಎಂದು ಅದು ಬಯಸಿದೆ ಎಂದು ಉತ್ತರಿಸಿದರು.
ತಾನು ಕೇಂದ್ರ ಕಾನೂನು ಸಚಿವನಾಗಿದ್ದಾಗಲೂ ಇವಿಎಂ ಬಗ್ಗೆ ಕೆಲವು ಶಂಕೆಗಳನ್ನೆತ್ತಲಾಗಿತ್ತು ಮತ್ತು ಈ ಬಗ್ಗೆ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿತ್ತು. ಈಗ ಗಂಭೀರವಾದ ಶಂಕೆಗಳಿವೆ ಮತ್ತು ಇವಿಎಮ್ಗಳನ್ನು ಕೈಬಿಟ್ಟು ಮತಪತ್ರಗಳನ್ನು ಬಳಸಬೇಕು ಎಂದರು.