ಹಾಸ್ಟೆಲ್ನಲ್ಲಿ ಗರ್ಭಿಣಿಯರಾದ ಬುಡಕಟ್ಟು ಬಾಲಕಿಯರು: ವಿಧಾನ ಸಭೆಯಲ್ಲಿ ಕೋಲಾಹಲ
ಭುವನೇಶ್ವರ, ಜು. 2: ಇಲ್ಲಿನ ಸರಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸನಿವಾಸ ಶಾಲೆಯಲ್ಲಿ ಬುಡಕಟ್ಟು ಬಾಲಕಿಯರು ಗರ್ಭಿಣಿಯರಾದ ಕುರಿತು ಕಾಂಗ್ರೆಸ್ ಸದಸ್ಯರು ಎಬ್ಬಿಸಿದ ಕೋಲಾಹಲದಿಂದ ಒರಿಶಾ ವಿಧಾನ ಸಭೆ ಮಂಗಳವಾರ ಅಶಿಸ್ತಿನ ವಾತಾವರಣಕ್ಕೆ ಸಾಕ್ಷಿಯಾಯಿತು.
ಕಾಂಗ್ರೆಸ್ ಸದಸ್ಯರ ಕೋಲಾಹಲದ ಕಾರಣಕ್ಕೆ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.
ಈ ಘಟನೆಯ ಬಗ್ಗೆ ನ್ಯಾಯೋಚಿತ ತನಿಖೆ ನಡೆಸಲು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ನಿರ್ದೇಶಿಸುವಂತೆ ಕಾಂಗ್ರೆಸ್ನ ಕಾರ್ಯಕಾರಿಣಿ ಪಕ್ಷದ ನಾಯಕ ನರಸಿಂಹ ಮಿಶ್ರಾ ಸ್ಪೀಕರ್ ಸೂರ್ಯ ನಾರಾಯಣ್ ಪತ್ರಾವೊ ಅವರಲ್ಲಿ ಮನವಿ ಮಾಡಿದರು. ಜುಲೈ 12ರಂದು ತನಿಖಾ ವರದಿ ಸಲ್ಲಿಸುವಂತೆ ಮಿಶ್ರಾ ಆಗ್ರಹಿಸಿದರು.
ದಿಲ್ಲಿ ಅಥವಾ ಮುಂಬೈಯಲ್ಲಿ ಇಂತಹ ಘಟನೆಗಳು ಸಂಭವಿಸಿದ್ದರೆ, ಸಂಪೂರ್ಣ ದೇಶ ಆಘಾತಕ್ಕೆ ಒಳಗಾಗುತ್ತಿತ್ತು ಎಂದು ಮಿಶ್ರಾ ಹೇಳಿದರು.
ಬಾಲಕಿಯರನ್ನು ಅವರ ಮನೆಗಳಿಗೆ ಕಳುಹಿಸಲಾಗಿದೆ. ಅಧಿಕಾರಿಗಳು ಈ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ ನಾಲ್ವರು ಬಾಲಕಿಯರು ಗರ್ಭಿಣಿಯಾಗಿದ್ದಾರೆ. ಆದರೆ, ಮತ್ತೊಂದು ಪರೀಕ್ಷೆ ನಡೆಸಿದಾಗ ಮೂವರು ಬಾಲಕಿಯರು ಮಾತ್ರ ಗರ್ಭಿಣಿಯಾಗಿದ್ದರು. ಇದು ಅಚ್ಚರಿಯ ವಿಚಾರ. ಈ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು ಎಂದು ಮಿಶ್ರಾ ಆಗ್ರಹಿಸಿದ್ದಾರೆ.