ತಮ್ಮ ಹೆಸರು ಬದಲಿಸಿಕೊಳ್ಳಲು ಮುಂದಾದ ಸರಕಾರಿ ಅಧಿಕಾರಿ ನಿಯಾಝ್ ಖಾನ್: ಕಾರಣವೇನು ಗೊತ್ತಾ?
ಹೊಸದಿಲ್ಲಿ, ಜು.7: ದೇಶದಲ್ಲಿ ಗುಂಪು ಹಲ್ಲೆ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಧ್ಯಪ್ರದೇಶ ಕಮಲ್ ನಾಥ್ ಸರ್ಕಾರದ ಹಿರಿಯ ಮುಸ್ಲಿಂ ಅಧಿಕಾರಿಯೊಬ್ಬರು ತಮ್ಮ ಹೆಸರು ಬದಲಿಸಿಕೊಳ್ಳಲು ಮುಂದಾಗಿದ್ದಾರೆ.
ಶನಿವಾರ ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಹಿರಿಯ ಅಧಿಕಾರಿ ನಿಯಾಝ್ ಖಾನ್, ದೇಶದಲ್ಲಿ ಮುಸ್ಲಿಂ ಸಮುದಾಯದವರ ಸುರಕ್ಷತೆ ಬಗ್ಗೆ ಭೀತಿ ವ್ಯಕ್ತಪಡಿಸಿದ್ದಾರೆ.
ತಮ್ಮ ಮುಸ್ಲಿಂ ಗುರುತನ್ನು ಮರೆಸಿಕೊಳ್ಳುವ ಸಲುವಾಗಿ ಹೇಗೆ ಹೆಸರು ಬದಲಿಸಿಕೊಳ್ಳಬಹುದು ಎಂದು ಚಿಂತನೆ ನಡೆಸಿರುವ ಖಾನ್, ದ್ವೇಷದ ಖಡ್ಗದಿಂದ ತಪ್ಪಿಸಿಕೊಳ್ಳಬೇಕಾದರೆ ಇದು ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. "ಹೊಸ ಹೆಸರು ನನ್ನನ್ನು ಹಿಂಸಾತ್ಮಕ ಗುಂಪಿನಿಂದ ರಕ್ಷಿಸಬಲ್ಲದು" ಎಂದು ಹೇಳಿದ್ದಾರೆ.
ಸಾಮಾನ್ಯ ಮುಸ್ಲಿಮರಂತೆ ಇಸ್ಲಾಮಿಕ್ ಟೋಪಿ, ಕುರ್ತಾ ಧರಿಸಿ, ಗಡ್ಡಧಾರಿಯಲ್ಲದ ಕಾರಣದಿಂದ ಹೆಸರು ಬದಲಿಸುವ ಮೂಲಕ ದ್ವೇಷ ಹಾಗೂ ಹಿಂಸೆಯಿಂದ ತಪ್ಪಿಸಿಕೊಳ್ಳಬಹುದು ಎಂದವರು ಹೇಳಿದ್ದಾರೆ.
ಆದರೆ ಅವರ ಸಹೋದರನ ಸ್ಥಿತಿ ಭಿನ್ನ. "ನನ್ನ ಸಹೋದರ ಸಾಂಪ್ರದಾಯಿಕ ಉಡುಗೆ ಧರಿಸಿ ಗಡ್ಡ ಬಿಟ್ಟಿದ್ದಾರೆ. ಇದರಿಂದ ಅಪಾಯದ ಸ್ಥಿತಿಯಲ್ಲಿದ್ದಾರೆ" ಎಂದು ಖಾನ್ ಹೇಳಿದ್ದಾರೆ.