ವಿಚಾರಣೆ ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ನೀಡಲು ವಿಶೇಷ ನ್ಯಾಯಾಧೀಶರಿಂದ ಸುಪ್ರೀಂಗೆ ಕೋರಿಕೆ
ಬಾಬರಿ ಮಸೀದಿ ಧ್ವಂಸ ಪ್ರಕರಣ
ಹೊಸದಿಲ್ಲಿ,ಜು.15: ಅಯೋಧ್ಯೆಯಲ್ಲಿ 1992,ಡಿ.6ರಂದು ಬಾಬರಿ ಮಸೀದಿ ಕಟ್ಟಡ ಧ್ವಂಸಕ್ಕೆ ಸಂಬಂಧಿಸಿದಂತೆ ಹಿರಿಯ ಬಿಜೆಪಿ ನಾಯಕರಾದ ಎಲ್.ಕೆ.ಆಡ್ವಾಣಿ,ಕಲ್ಯಾಣ್ ಸಿಂಗ್ ಮತ್ತು ಮುರಳಿ ಮನೋಹರ ಜೋಶಿ ಅವರ ವಿರುದ್ಧದ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ವಿಶೇಷ ನ್ಯಾಯಾಧೀಶ ಎಸ್.ಕೆ.ಯಾದವ ಅವರು ವಿಚಾರಣೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶವನ್ನು ನೀಡುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದಾರೆ.
ಈ ವರ್ಷದ ಸೆ.30ರಂದು ತಾನು ಸೇವಾ ನಿವೃತ್ತಿ ಹೊಂದಲಿದ್ದೇನೆ ಎಂದು ಮೇ ತಿಂಗಳಿನಲ್ಲಿ ಸವೋಚ್ಚ ನ್ಯಾಯಾಲಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿರುವ ನ್ಯಾ.ಯಾದವ ಅವರು,ಕಳೆದ ಎರಡು ವರ್ಷಗಳಿಂದ ದೈನಂದಿನ ಆಧಾರದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ ಮತ್ತು ಅದು ಪೂರ್ಣಗೊಳ್ಳಲು ಇನ್ನೂ ಆರು ತಿಂಗಳು ಬೇಕು ಎಂದು ತಿಳಿಸಿದ್ದರು.
ಸೋಮವಾರ ಈ ವಿಷಯವನ್ನು ಕೈಗೆತ್ತಿಕೊಂಡಿದ್ದ ನ್ಯಾ.ರೋಹಿನ್ಟನ್ ಫಲಿ ನಾರಿಮನ್ ನೇತೃತ್ವದ ಪೀಠವು,ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ನಿವೃತ್ತರಾಗುತ್ತಿದ್ದರೆ ಅನುಸರಿಸಬೇಕಾದ ನಿಯಮ ಮತ್ತು ನಿಬಂಧನೆಗಳು ಹಾಗೂ ಸೇವಾ ವಿಸ್ತರಣೆಗಾಗಿ ಕ್ರಮಗಳ ಕುರಿತು ತನಗೆ ತಿಳಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿತು.
ಈ ವಿಷಯದಲ್ಲಿ ಮುಂದಿನ ವಿಚಾರಣೆಯನ್ನು ಜು.19ಕ್ಕೆ ನಿಗದಿಗೊಳಿಸಲಾಗಿದೆ.
ಎರಡು ವರ್ಷಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಎಪ್ರಿಲ್ 2017ರಲ್ಲಿ ವಿಶೇಷ ನ್ಯಾಯಾಧೀಶರಿಗೆ ಸೂಚಿಸಿತ್ತು.