ಕಥುವಾ ಬಾಲಕಿಯ ಅತ್ಯಾಚಾರ-ಹತ್ಯೆ ಪ್ರಕರಣ: ಜಮ್ಮುಕಾಶ್ಮೀರ ಸರಕಾರ, 6 ದೋಷಿಗಳಿಗೆ ನೋಟಿಸ್
ಚಂಡಿಗಢ, ಜು. 18: ಕಥುವಾದ 8 ವರ್ಷದ ಬಾಲಕಿಯ ಅತ್ಯಾಚಾರ-ಹತ್ಯೆ ಪ್ರಕರಣದ ಆರು ಮಂದಿ ದೋಷಿಗಳಿಗೆ ಹಾಗೂ ಜಮ್ಮುಕಾಶ್ಮೀರ ಸರಕಾರಕ್ಕೆ ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯ ಗುರುವಾರ ನೋಟಿಸು ಜಾರಿ ಮಾಡಿದೆ.
ದೋಷಿಗಳ ಶಿಕ್ಷೆಯ ಪ್ರಮಾಣ ಹೆಚ್ಚಿಸುವಂತೆ ಕೋರಿ ಕಥುವಾ ಬಾಲಕಿಯ ತಂದೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಪಂಜಾಬ್ ಹಾಗೂ ಹರ್ಯಾಣ ನ್ಯಾಯಾಲಯ ಈ ನೋಟಿಸು ಜಾರಿ ಮಾಡಿದೆ. ದೋಷಿಗಳಿಗೆ ಶಿಕ್ಷೆಯನ್ನು ಮರಣದಂಡನೆ ಹಾಗೂ ಜೀವಾವಧಿಗೆ ಏರಿಸುವಂತೆ ಬಾಲಕಿಯ ತಂದೆ ಜುಲೈ 10ರಂದು ಸಲ್ಲಿಸಿದ ಮನವಿಯಲ್ಲಿ ಕೋರಿದ್ದರು. ಅಲ್ಲದೆ, ಈ ಪ್ರಕರಣದಲ್ಲಿ ಓರ್ವನನ್ನು ಖುಲಾಸೆಗೊಳಿಸಿರುವುದನ್ನು ಅವರು ಪ್ರಶ್ನಿಸಿದ್ದರು. ಈ ಮನವಿ ಹಿನ್ನೆಲೆಯಲ್ಲಿ ನ್ಯಾಯಾಲಯ ಜಮ್ಮು ಹಾಗೂ ಕಾಶ್ಮೀರ ಸರಕಾರಕ್ಕೆ ಹಾಗೂ ಎಲ್ಲ ಆರೋಪಿಗಳಿಗೆ ನೋಟಿಸು ಜಾರಿ ಮಾಡಿದೆ ಎಂದು ದೂರುದಾರ ಪರ ವಕೀಲ ಉತ್ಸವ್ ಬಾಸಿನ್ ಹೇಳಿದ್ದಾರೆ.
ವಿಭಾಗೀಯ ನ್ಯಾಯಪೀಠದ ನ್ಯಾಯಾಧೀಶರಾದ ರಾಜೀವ್ ಶರ್ಮಾ ಹಾಗೂ ಹರೀಂದರ್ ಸಿಂಗ್ ಅವರು ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ನಿಗದಿಪಡಿಸಿದ್ದಾರೆ ಎಂದು ಬಾಸಿನ್ ತಿಳಿಸಿದ್ದಾರೆ.