ನಮಗೆ ಇವಿಎಂ ಬೇಕಿಲ್ಲ,ಚುನಾವಣೆಗಳಲ್ಲಿ ಮತಪತ್ರಗಳನ್ನೇ ಬಳಸಿ: ಮಮತಾ ಆಗ್ರಹ
ಕೋಲ್ಕತಾ,ಜು.21: ನಗರಸಭೆಗಳು ಮತ್ತು ಇತರ ಚುನಾವಣೆಗಳನ್ನು ಮತಪೆಟ್ಟಿಗೆಗಳ ಮೂಲಕವೇ ನಡೆಸಬೇಕು ಎಂದು ರವಿವಾರ ಇಲ್ಲಿ ಹೇಳಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಮತಪತ್ರಗಳ ಬಳಕೆಗೆ ಮರಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದರು.
1993ರಲ್ಲಿ ಪೊಲೀಸ್ ಗೋಲಿಬಾರ್ನಲ್ಲಿ ಮೃತಪಟ್ಟಿದ್ದ 13 ಜನರ ಸ್ಮರಣಾರ್ಥ ತೃಣಮೂಲ ಪಕ್ಷವು ಇಲ್ಲಿ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು,”2019ರ ಲೋಕಸಭಾ ಚುನಾವಣೆಯು ಒಂದು ನಿಗೂಢತೆಯಾಗಿದೆ,”ಅದು ಇತಿಹಾಸವಲ್ಲ. ನಮಗೆ ಇವಿಎಂಗಳು ಬೇಕಿಲ್ಲ,ಮತಪತ್ರಗಳ ಮೂಲಕ ಚುನಾವಣೆಗಳನ್ನು ನಾವು ಬಯಸಿದ್ದೇವೆ” ಎಂದರು. ತನ್ನ ಪಕ್ಷವು ಚೇಂಜ್(ಬದಲಾವಣೆ) ಬಯಸಿದೆಯೇ ಹೊರತು ರಿವೆಂಜ್(ಪ್ರತೀಕಾರ) ಅಲ್ಲ ಎಂದೂ ಅವರು ನುಡಿದರು.
ಪ.ಬಂಗಾಳದಲ್ಲಿ 18 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿರುವುದರ ಬಗ್ಗೆ ಬಿಜೆಪಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು,ಹಿಂದೆ ನಾವು 26 ಸ್ಥಾನಗಳನ್ನು ಗೆದ್ದಿದ್ದಾಗ ನಾವು ಯಾವುದೇ ಪಕ್ಷದ ಕಚೇರಿಯನ್ನು ಅತಿಕ್ರಮಿಸಿರಲಿಲ್ಲ. ನಾವು ನಮ್ಮ ಕಠಿಣ ಪರಿಶ್ರಮದಿಂದ ಗೆದ್ದಿದ್ದೆವು ಎಂದರು.
ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲ್ಲಲು ಬಳಸಿದ್ದ ಕಪ್ಪುಹಣ ಮತ್ತು ಕಮಿಷನ್ ಹಣವನ್ನು ಬಿಜೆಪಿ ಮೊದಲು ಮರಳಿಸಬೇಕು ಎಂದ ಮಮತಾ,ಬಿಜೆಪಿಯು ಗುಡ್ಡೆ ಹಾಕಿರುವ ಕಪ್ಪುಹಣವನ್ನು ಮರಳಿಸುವಂತೆ ಬೇಡಿಕೆಯೊಂದಿಗೆ ತನ್ನ ಪಕ್ಷವು ಜು.26ರಂದು ರಾಜ್ಯವ್ಯಾಪಿ ಪ್ರತಿಭಟನೆಯನ್ನು ನಡೆಸಲಿದೆ ಎಂದರು.