ಸುಪ್ರೀಂಕೋರ್ಟ್ನಲ್ಲಿ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
ವಿಶ್ವಾಸಮತ ಯಾಚನೆ ಇವತ್ತೇ ಮುಗಿಯುತ್ತದೆ ಎಂದ ಸ್ಪೀಕರ್ ಪರ ವಕೀಲ ಅಭಿಷೇಕ್ ಸಿಂಘ್ವಿ
ಹೊಸದಿಲ್ಲಿ, ಜು.23: ಪಕ್ಷೇತರ ಶಾಸಕರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಯಾವುದೇ ನಿರ್ದೇಶನ ನೀಡದೇ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಇಂದೇ ವಿಶ್ವಾಸಮತ ನಡೆಸುವ ಭರವಸೆಯನ್ನು ಸ್ಪೀಕರ್ ನೀಡಿದ್ದಾರೆ. ವಿಶ್ವಾಸಮತ ಯಾಚಿಸುವ ಬಗ್ಗೆ ನ್ಯಾಯಾಲಯಕ್ಕೆ ನಂಬಿಕೆ ಇದೆ ಎಂದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿಚಾರಣೆಯನ್ನು ನಾಳೆಗೆ ಮುಂದೂಡಿದರು.
ಇಂದು ಸಂಜೆಯೊಳಗೆ ವಿಶ್ವಾಸಮತ ಯಾಚನೆಗೆ ಸೂಚಿಸಿ. ಉದ್ದೇಶಪೂರ್ವಕವಾಗಿ ವಿಶ್ವಾಸಮತ ಯಾಚಿಸದೇ ದಿನದೂಡುತ್ತಿದ್ದಾರೆ. ಹೀಗೆಯೇ ಮುಂದುವರಿಯಲು ಬಿಡಬೇಡಿ ಎಂದು ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೊಹಟಗಿ ಮನವಿ ಮಾಡಿದರು.
ಈ ಮಾತಿಗೆ ಆಕ್ಷೇಪಿಸಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ವಿಧಾನಸಭೆಯಲ್ಲಿ ಚರ್ಚೆ ಆರಂಭವಾಗಿ ಕೇವಲ 4 ದಿನವಾಗಿದೆ. ಸ್ಪೀಕರ್ ನಿನ್ನೆ ಸಂಜೆ ಮತ ಯಾಚಿಸಿ ಎಂದು ಹೇಳಿದ್ದಾರೆ. ಮಂಗಳವಾರ ಸಂಜೆ ವಿಶ್ವಾಸಮತ ಪ್ರಕ್ರಿಯೆ ಮುಗಿಸುವುದಾಗಿ ಹೇಳಿದ್ದಾರೆ. ರಾಜ್ಯಪಾಲರು ತರಾತುರಿಯಲ್ಲಿ ನಿರ್ದೇಶನ ನೀಡಿದ್ದೇಕೆ?ಅವರು ಕಲಾಪದ ಬಗ್ಗೆ ಹಸ್ತಕ್ಷೇಪ ಮಾಡುವಂತಿಲ್ಲ.ಆದರೂ ಅವರು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ವಿಶ್ವಾಸ ಮತ ಯಾವಾಗ ಮುಗಿಸುತ್ತೀರಿ? ಎಂದು ನ್ಯಾಯಮೂರ್ತಿ ರಂಜನ್ ಗೊಗೊಯ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಂಘ್ವಿ,‘‘ಚರ್ಚೆಯ ಮಧ್ಯೆ ಮತಕ್ಕೆ ಹೇಗೆ ಹಾಕಲು ಸಾಧ್ಯ? ಎಲ್ಲರೂ ಸದನದಲ್ಲಿ ಮಾತಾಡಬೇಕು. ಚರ್ಚೆ ನಾಳೆಗೂ ಮುಂದುವರಿಯಬಹುದು ಎಂದರು.