24 ವರ್ಷಗಳಿಂದ ರಸ್ತೆ ಅಗಲೀಕರಣದಲ್ಲಿ ತೊಡಗಿರುವ ವಿಶೇಷ ಕಾರ್ಗಿಲ್ ಯೋಧ !
11500 ಅಡಿ ಎತ್ತರದಲ್ಲಿರುವ ಅತ್ಯಂತ ದುರ್ಗಮ ರಸ್ತೆ
ಝೋಜಿಲ್ಲಾ ಪಾಸ್: 11500 ಅಡಿ ಎತ್ತರದಲ್ಲಿ ಅತಿನೇರಳೆ ಕಿರಣ ತಡೆಯುವ ಗ್ಲಾಸ್ ಹಾಕಿಕೊಂಡು, ಸುರಕ್ಷಾ ಹೆಲ್ಮೆಟ್ ಧರಿಸಿ ಬುಲ್ಡೋಜರ್ ಮೇಲೆ ಕುಳಿತು ಪರ್ವತದ ಕಲ್ಲುಗಳನ್ನು ರಸ್ತೆಯಿಂದ ಆಚೆ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ಒಂದಲ್ಲ, ಎರಡಲ್ಲ; ಸತತ 24 ವರ್ಷಗಳಿಂದ ಈ ಕಾಯಕ ಯೋಗಿ ಸೇನೆಯ ಸೇವೆಯಲ್ಲಿದ್ದಾರೆ.
ಈತನ ಹೆಸರು ಇನಾಯತ್ ಉಲ್ಲಾ ಖಾನ್ ಬಲ್ತಿ. ಝೋಜಿಲ್ಲಾ ರಸ್ತೆಯ ಅಗಲೀಕರಣಕ್ಕೆ ಆಹೋರಾತ್ರಿ ಶ್ರಮಿಸುತ್ತಿದ್ದಾರೆ. ಅತ್ಯಂತ ದುರ್ಗಮ ರಸ್ತೆ ಎನಿಸಿದ ಇದರ ವಿಸ್ತರಣೆಯಿಂದ ಭಾರತೀಯ ಸೇನೆ ಸುಲಭವಾಗಿ ಕಾರ್ಗಿಲ್ ತಲುಪ ಬಹುದಾಗಿದೆ.
ವಾಕ್ ಹಾಗೂ ಶ್ರವಣಶಕ್ತಿ ದೋಷದ ಬಲ್ತಿ, ಸೇನೆಗಾಗಿ ಕಳೆದ 24 ವರ್ಷಗಳಿಂದ ರಸ್ತೆ ತೆರವುಗೊಳಿಸುವ ಕಾರ್ಯ ಮಾಡುತ್ತಲೇ ಇದ್ದಾರೆ. ಕಳೆದ ಮಾರ್ಚ್ನಲ್ಲಿ ಭಾರೀ ಹಿಮಪಾತದಿಂದ ಪವಾಡಸದೃಶವಾಗಿ ಪಾರಾಗಿದ್ದ ಬಲ್ತಿ, ಮಂಜಿನ ಅಂಧತ್ವದಲ್ಲಿ ಕೂಡಾ ರಸ್ತೆ, ತಿರುವು, ಏರುಗಳನ್ನು ಅರಿಯುವ ಚಾಕಚಕ್ಯತೆಯಿಂದಾಗಿ ಬದುಕಿಕೊಂಡಿದ್ದರು. 40 ವರ್ಷದ ಬಲ್ತಿ 32ನೇ ಕಾರ್ಯಪಡೆ ಘಟಕದ ಹೆಮ್ಮೆಯ ಸದಸ್ಯ.
ಕಾಶ್ಮೀರದ ಗಂದೆರ್ಬಾಲ್ ಮತ್ತು ಲಡಾಕ್ನ ದ್ರಾಸ್ ನಡುವೆ ಕಂಡುಬರುವ ಬುಡಕಟ್ಟು ಜನಾಂಗಕ್ಕೆ ಸೇರಿದ ಬಲ್ತಿ, ಗಡಿ ರಸ್ತೆ ಸಂಸ್ಥೆಯ ಗುತ್ತಿಗೆ ಕಾರ್ಮಿಕ. ವಾಸ್ತವ ನಿಯಂತ್ರಣ ರೇಖೆಯ ಪರ್ವತ, ಕಂದರ ಮತ್ತಿತರ ಕಠಿಣ ಪ್ರದೇಶದಲ್ಲಿ ರಸ್ತೆ ಮಾಡುವ ಹೊಣೆಯನ್ನು ಗಡಿ ರಸ್ತೆ ಸಂಸ್ಥೆ ವಹಿಸಿಕೊಂಡಿದ್ದು, ಇದರಲ್ಲಿ ಬಲ್ತಿ ಸೇವೆ ಸಲ್ಲಿಸುತ್ತಿದ್ದಾರೆ.
ಮೊಟ್ಟಮೊದಲ ಬಾರಿಗೆ 1999ರಲ್ಲಿ ಝೋಜಿಲ್ಲಾ ಪಾಸ್ ಡಿಸೆಂಬರ್ ಹಾಗೂ ಮೇ ತಿಂಗಳ ನಡುವೆ ಭಾರೀ ಹಿಮಪಾತದಿಂದಾಗಿ ಮುಚ್ಚಿಕೊಂಡಿದ್ದ ಹಿನ್ನೆಲೆಯಲ್ಲಿ ಇದೀಗ ಭಿನ್ನ ಎತ್ತರದಲ್ಲಿ ಪ್ರತ್ಯೇಕ ಎರಡು ರಸ್ತೆಗಳನ್ನು ಹೊಂದಿದೆ. 10 ಸಾವಿರ ಅಡಿ ಎತ್ತರದಲ್ಲಿ ಈ ಎರಡೂ ರಸ್ತೆಗಳು ಕೂಡುತ್ತವೆ.
ಬಲ್ತಿ ಹಾಗೂ ಇಂಥ 200 ಮಂದಿ ಕಾರ್ಮಿಕರು ಈ ಭಾಗದ ರಸ್ತೆಗೆ ಇಂಟರ್ಲಾಕ್ ಅಳವಡಿಸಿದ ಹಿನ್ನೆಲೆಯಲ್ಲಿ ಘನ ವಾಹನಗಳ ದ್ವಿಮುಖ ಸಂಚಾರಕ್ಕೆ ಜೂನ್ 28ರಂದು ಅವಕಾಶ ಕಲ್ಪಿಸಲಾಗಿದೆ. 2016ರಿಂದೀಚೆಗೆ ಪ್ರತಿ ದಿನ 50 ಮೆಟ್ರಿಕ್ ಟನ್ ಸಾಮರ್ಥ್ಯದ 10 ಸಾವಿರ ಇಂಟರ್ಲಾಕ್ ಅಳವಡಿಸಲಾಗುತ್ತಿದೆ.
"ಬಲ್ತಿ ಆರಂಭಿಕ ಹಂತದಲ್ಲಿ ರಸ್ತೆಯ ಸಂಯೋಜನೆಯನ್ನು ಪತ್ತೆ ಮಾಡುವ ಮೂಲಕ ತಮ್ಮ ಬುಲ್ಡೋಜರ್ನೊಂದಿಗೆ ಹಿಮ ತೆರವು ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಾರೆ. ಕಾರ್ಗಿಲ್ ಹಾಗೂ ಲಡಾಖ್ ಪ್ರಾಂತ್ಯವನ್ನು ಹೊರಜಗತ್ತಿನ ಜತೆ ಸಂಪರ್ಕಿಸುವ ರಸ್ತೆಯನ್ನು ಹೀಗೆ ತೆರವುಗೊಳಿಸುತ್ತೇವೆ" ಎಂದು ಕಾರ್ಯಪಡೆಯ ಕ್ಯಾಪ್ಟನ್ ಶುಭಂ ಸೂದ್ ವಿವರಿಸುತ್ತಾರೆ.
ಬುಲ್ಡೋಜರ್ ಚಾಲನೆಯಿಂದ ಹಿಡಿದು, ಆಯಿಲ್ ತುಂಬುವುದು, ಜಿಲೆಟಿನ್ ಸ್ಫೋಟಕ್ಕೆ ಕಾಯುವುದು, ರಸ್ತೆ ತೆರವು ಹೀಗೆ ಪ್ರತಿ ವಿಚಾರದಲ್ಲೂ ಕೇವಲ ಸಂಕೇತಗಳ ಮೂಲಕ ಮಾತ್ರ ಬಲ್ತಿ ಸೂಚನೆಗಳನ್ನು ಪಡೆಯುತ್ತಾರೆ. ಎಂಥ ಕಷ್ಟಕರ ಕೆಲಸವನ್ನಾದರೂ ಮಾಡುವ ಚಾಕಚಕ್ಯತೆ ಆತನಲ್ಲಿದೆ ಎಂದು ಸಹ ಕಾರ್ಮಿಕರು ಹೇಳುತ್ತಾರೆ.
"ನಮ್ಮ ಜವಾನರಿಗೆ ಹಾಗೂ ನಾಗರಿಕರಿಗೆ ಸಹಾಯ ಮಾಡುವುದರಲ್ಲಿ ಇರುವ ರೋಮಾಂಚನವೇ ಬೇರೆ. ಹಿಂದೂಸ್ತಾನದ ಬಗ್ಗೆ ನಮ್ಮ ಎದೆಗಳಲ್ಲಿ ಹೆಮ್ಮೆ ಇದೆ" ಎಂದು ಸಹಕಾರ್ಮಿಕ ರಶೀದ್ ಹೇಳುತ್ತಾರೆ.