ಪ್ರೇಯಸಿಯನ್ನು ಕೊಂದು ಉಪ್ಪಿನಲ್ಲಿ ಹೂತ ಸೈನಿಕ!
ತಿರುವನಂತಪುರ, ಜು.26: ಪ್ರೇಯಸಿಯನ್ನು ಉಸಿರುಗಟ್ಟಿಸಿ ಸಾಯಿಸಿ, ಆಕೆಯ ದೇಹವನ್ನು ಉಪ್ಪಿನಿಂದ ಮುಚ್ಚಿ ಹೂತುಹಾಕಿ, ಯಾರಿಗೂ ಅನುಮಾನ ಬಾರದಂತೆ ಹೂತ ಜಾಗದಲ್ಲಿ ಗಿಡಗಳನ್ನು ನೆಟ್ಟ ಪ್ರಕರಣ ತಿರುವನಂತಪುರ ಜಿಲ್ಲೆಯ ಅಂಬೂರಿ ಎಂಬಲ್ಲಿ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ.
30 ವರ್ಷದ ಮಹಿಳೆಯ ಹತ್ಯೆ ಸಂಬಂಧ ಪ್ರಕರಣದ ಮೂವರು ಆರೋಪಿಗಳ ಪೈಕಿ ಒಬ್ಬನನ್ನು ನಿನ್ನೆ ಬಂಧಿಸಲಾಗಿದೆ. ಇತರ ಇಬ್ಬರಿಗಾಗಿ ಶೋಧ ನಡೆದಿದೆ. ಆರೋಪಿಗಳ ಪೈಕಿ ಅಖಿಲ್ ನಾಯರ್ ಎಂಬಾತ ಸೈನಿಕನಾಗಿದ್ದು, ಈತ ದಿಲ್ಲಿಯಲ್ಲಿದ್ದಾನೆ ಎಂದು ಹೇಳಲಾಗಿದೆ. ಆತನ ವಿವರಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಕೊಳೆತ ಸ್ಥಿತಿಯಲ್ಲಿದ್ದ ರೇಖಾ ಮೋಲ್ ಮೃತದೇಹವನ್ನು ಬುಧವಾರ ಆರೋಪಿ ಅಖಿಲ್ ನಾಯರ್ನ ಮನೆ ಆವರಣದಿಂದ ವಶಪಡಿಸಿಕೊಳ್ಳಲಾಗಿದೆ.
"ಸೇನೆಯಲ್ಲಿದ್ದ ಅಖಿಲ್ ನಾಯರ್ ಹಾಗೂ ರೇಖಾ ಮೋಲ್ ನಡುವೆ ಕೆಲ ವರ್ಷಗಳಿಂದ ಸಂಬಂಧ ಇತ್ತು. ಈ ಸಂಬಂಧ ಮುಂದುವರಿಸಲು ಅಖಿಲ್ಗೆ ಇಷ್ಟವಿರಲಿಲ್ಲ. ಆತ ಮತ್ತೊಬ್ಬಾಕೆಯ ಜತೆ ಸಂಬಂಧ ಬೆಳೆಸಿದ. ಆದರೆ ಅಖಿಲ್ ಜೊತೆಗಿನ ಸಂಬಂಧ ಬಿಟ್ಟುಬಿಡಲು ರೇಖಾ ಒಪ್ಪಿರಲಿಲ್ಲ.
ಇದೇ ಕಾರಣಕ್ಕೆ ಅಖಿಲ್, ಆತನ ಸಹೋದರ ರಾಹುಲ್ ಹಾಗೂ ಗೆಳೆಯ ಆದರ್ಶ ಎಂಬಾತ ಜತೆ ಸೇರಿ ಈ ಹತ್ಯೆಗೆ ಸಂಚು ರೂಪಿಸಿದ್ದಾರೆ. ಮಹಿಳೆ ನಾಡಾರ್ ಕ್ರೈಸ್ತ ಸಮುದಾಯಕ್ಕೆ ಸೇರಿದವಳಾಗಿದ್ದು, ಪ್ರೇಮಸಂಬಂಧದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.