ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತ: ಬಿಜೆಪಿಗೆ ಪ್ರಶ್ನೆಗಳ ಸುರಿಮಳೆಗೈದ ಪ್ರಿಯಾಂಕಾ
ಹೊಸದಿಲ್ಲಿ, ಜು.29: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೋಮವಾರ ಉತ್ತರಪ್ರದೇಶದ ಆಡಳಿತಾರೂಢ ಬಿಜೆಪಿ ಸರಕಾರದ ಮೇಲೆ ಪ್ರಶ್ನೆಗಳ ಸುರಿಮಳೆಗರೆದರು.
ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ತನ್ನ ಮೇಲೆ ಅತ್ಯಾಚಾರ ಎಸೆಗಿದ್ದ ಎಂದು ಆರೋಪಿಸಿರುವ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರು ರವಿವಾರ ರಾಯ್ಬರೇಲಿ ಜಿಲ್ಲೆಯಲ್ಲಿ ಟ್ರಕ್ವೊಂದಕ್ಕೆ ಢಿಕ್ಕಿಯಾಗಿತ್ತು. ಸಂತ್ರಸ್ತೆ ಮಹಿಳೆ ಗಂಭೀರ ಗಾಯಗೊಂಡಿದ್ದು, ಮಹಿಳೆಯ ಇಬ್ಬರು ಸಂಬಂಧಿಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
‘‘ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತವಾಗಿರುವ ಘಟನೆ ಆಘಾತ ತಂದಿದೆ. ಸಿಬಿಐ ತನಿಖೆ ಯಾವ ಹಂತದಲ್ಲಿದೆ? ಆರೋಪಿ ಶಾಸಕ ಈಗಲೂ ಬಿಜೆಪಿ ಪಕ್ಷದಲ್ಲೇ ಉಳಿದುಕೊಂಡಿರುದೇಕೆ?ಈ ಎಲ್ಲ ಪ್ರಶ್ನೆಗಳಿಗೆ ಈ ತನಕ ಉತ್ತರ ನೀಡದ ಬಿಜೆಪಿ ಸರಕಾರದಿಂದ ನಾವು ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವೇ?ಎಂದು ಟ್ವೀಟರ್ನ ಮೂಲಕ ಪ್ರಿಯಾಂಕಾ ಪ್ರಶ್ನಿಸಿದರು.
ಯೋಗಿ ಆದಿತ್ಯನಾಥ್ ಸರಕಾರ ಅತ್ಯಾಚಾರ ಸಂತ್ರಸ್ತೆ ಹಾಗೂ ಪ್ರಕರಣದ ಪ್ರತ್ಯಕ್ಷಸಾಕ್ಷಿದರರಿಗೆ ಸರಿಯಾದ ರಕ್ಷಣೆ ನೀಡದಿರುವುದನ್ನು ಕಾಂಗ್ರೆಸ್ ನಾಯಕಿ ಪ್ರಶ್ನಿಸಿದ್ದಾರೆ.