ಅತ್ಯಾಚಾರ ಆರೋಪ ಸಾಬೀತುಪಡಿಸುವುದು ಕಷ್ಟ ಎಂದ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್!
ಲಕ್ನೋ, ಆ.5: "ದುರ್ಬಲ ರಾಜಕೀಯ ಎದುರಾಳಿಗಳು ನನ್ನನ್ನು ಗೆಲ್ಲಲಾಗದೇ ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆರೋಪ ಮಾಡುವುದು ಸುಲಭ; ಅದನ್ನು ಸಾಬೀತುಪಡಿಸುವುದು ಕಷ್ಟ ಎಂದು ಉನ್ನಾವೊ ಅತ್ಯಾಚಾರ ಹಾಗೂ ರಾಯಬರೇಲಿ ಕಾರು ಅಪಘಾತದ ಆರೋಪಿ, ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಹೇಳಿದ್ದಾರೆ.
ಸೀತಾಪುರ ಜಿಲ್ಲಾ ಕಾರಗೃಹದಿಂದ ದಿಲ್ಲಿಯ ತೀಸ್ ಹಜಾರಿ ಕೋರ್ಟ್ನಲ್ಲಿ ಹಾಜರುಪಡಿಸುವ ಸಲುವಾಗಿ ಕರೆದೊಯ್ಯುವ ವೇಳೆ ಸುದ್ದಿಗಾರರೊಂದಿಗೆ ರವಿವಾರ ರಾತ್ರಿ ಮಾತನಾಡಿದ ಆರೋಪಿ, ಸಿಬಿಐ ಬಗ್ಗೆ, ಸುಪ್ರೀಂಕೋರ್ಟ್ ಬಗ್ಗೆ ಹಾಗೂ ದೇಶದ ಕಾನೂನಿನ ಬಗ್ಗೆ ನಂಬಿಕೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಅನ್ವಯ ಸಹ ಆರೋಪಿ ಶಶಿ ಸಿಂಗ್ ಜತೆ ಸೆಂಗಾರ್ ರನ್ನು ದಿಲ್ಲಿಗೆ ಸ್ಥಳಾಂತರಿಸಲಾಗಿದೆ. ಪ್ರತ್ಯೇಕ ವಾಹನಗಳಲ್ಲಿ ಇಬ್ಬರನ್ನೂ ಕರೆದೊಯ್ಯಲಾಗಿದ್ದು, ಡಿವೈಎಸ್ಪಿ, ಇಬ್ಬರು ಇನ್ಸ್ಪೆಕ್ಟರ್ಗಳು ಹಾಗೂ 20 ಪೊಲೀಸರ ರಕ್ಷಣೆಯಲ್ಲಿ ರಸ್ತೆ ಮೂಲಕ ಕರೆದೊಯ್ಯಲಾಗಿದೆ.
ಇದಕ್ಕೂ ಮುನ್ನ ಸಿಬಿಐ ಅಧಿಕಾರಿಗಳು ಸೆಂಗಾರ್ನನ್ನು ಸೀತಾಪುರ ಜೈಲಿನಲ್ಲಿ ವಿಚಾರಣೆಗೆ ಗುರಿಪಡಿಸಿದರು. ಎರಡು ಪ್ರತ್ಯೇಕ ತಂಡಗಳು ಶನಿವಾರ ಹಾಗೂ ರವಿವಾರ ಆರೋಪಿಯ ವಿಚಾರಣೆ ನಡೆಸಿವೆ. ಸೀತಾಪುರ ಜೈಲಿನಲ್ಲಿ ಆರೋಪಿಯನ್ನು ಭೇಟಿ ಮಾಡಲು ಬಂದ ಸಂದರ್ಶಕರ ವಿವರಗಳನ್ನು ಕೂಡ ಸಿಬಿಐ ವಿಶ್ಲೇಷಿಸುತ್ತಿದೆ. 2019ರ ಮೇ 8ರಿಂದ ಸೀತಾಪುರ ಜೈಲಿನ ವಿಶೇಷ ಸೆಲ್ನಲ್ಲಿ ಇರುವ ಈತನನ್ನು ಪ್ರತಿ ದಿನ ಸರಾಸರಿ 10 ಮಂದಿ ಭೇಟಿಯಾಗುತ್ತಿದ್ದಾರೆ.