ಮೆಹಬೂಬಾ ಮುಫ್ತಿಯನ್ನು ಉಗ್ರವಾದಿ ಎಂದು ಘೋಷಿಸಿ ಜೈಲಿಗೆ ತಳ್ಳಬೇಕು: ಶಿವಸೇನೆ
ಮುಂಬೈ, ಆ.5: ಕಾಶ್ಮೀರದಲ್ಲಿನ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಪಿಡಿಪಿ ನಾಯಕಿ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ನೀಡಿದ ಹೇಳಿಕೆಗಳಿಗಾಗಿ ಅವರನ್ನು ಉಗ್ರವಾದಿಯೆಂದು ಘೋಷಿಸಿ ಜೈಲಿಗೆ ತಳ್ಳಬೇಕು ಎಂದು ಶಿವಸೇನೆ ಸೋಮವಾರ ಹೇಳಿದೆ.
ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದಿರುವ ಶಿವಸೇನೆ, ಪಿಡಿಪಿ ಮುಖ್ಯಸ್ಥೆ `ಉಗ್ರವಾದದ ಭಾಷೆಯಲ್ಲಿ'' ಮಾತನಾಡುತ್ತಿದ್ದಾರೆ ಹಾಗೂ ಇತ್ತೀಚೆಗೆ ತಿದ್ದುಪಡಿಗೊಂಡ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯಿದೆಯನ್ವಯ ಆಕೆಯನ್ನು ಜೈಲಿಗೆ ತಳ್ಳದೇ ಇದ್ದರೆ ಕಾಶ್ಮೀರದಲ್ಲಿ ಹಿಂಸೆಯನ್ನು ಸೃಷ್ಟಿಸುವ ಯೋಜನೆ ಯಶಸ್ವಿಯಾಗಬಹುದು ಎಂದಿದೆ.
“ಮೆಹಬೂಬಾ ಮುಫ್ತಿ ಅವರು 35ಎ ವಿಧಿ ಕುರಿತಂತೆ ಎಚ್ಚರಿಕೆ ನೀಡಿದ್ದಾರೆ. ಪ್ರತ್ಯೇಕತಾವಾದಿಗಳ ಭಾಷೆಯಂತೆಯೇ ಕಾಶ್ಮೀರಿಗಳು ಬಲಿದಾನಕ್ಕೆ ಸಿದ್ಧರಾಗಬೇಕೆಂದು ಅವರು ಹೇಳಿದ್ದಾರೆ. ಗೃಹ ಸಚಿವರು ಇದನ್ನು ಸಹಿಸಬಾರದು, ಇದು ಉಗ್ರವಾದದ ಭಾಷೆ'' ಎಂದು ಸಾಮ್ನಾದ ಲೇಖನ ತಿಳಿಸಿದೆ.
ಕಾಶ್ಮೀರ ಸಮಸ್ಯೆಯನ್ನು ಮಾತುಕತೆಗಳ ಮೂಲಕ ಪರಿಹರಿಸಬಹುದೆಂದು ತಿಳಿಯುವ ಜನರು ಭ್ರಮನಿರಸನಿಗಳು ಎಂದು ಶಿವಸೇನೆ ಹೇಳಿದೆ.