ಪಂಚತಾರಾ ಹೋಟೆಲ್ಗೆ 12 ಲಕ್ಷ ರೂ. ಪಂಗನಾಮ !
ಹೈದರಾಬಾದ್: ಇಲ್ಲಿನ ಪಂಚತಾರಾ ಹೋಟೆಲ್ ಒಂದರಲ್ಲಿ 100 ದಿನಗಳಿಗೂ ಹೆಚ್ಚು ಕಾಲ ತಂಗಿದ್ದ ಉದ್ಯಮಿಯೊಬ್ಬರು 12.34 ಲಕ್ಷ ರೂ. ಬಿಲ್ ಪಾವತಿಸದೇ ಪರಾರಿಯಾಗಿರುವ ಸ್ವಾರಸ್ಯಕರ ಘಟನೆ ವರದಿಯಾಗಿದೆ.
ತಾಜ್ ಬಂಜಾರಾ ಹೋಟೆಲ್ ಆಡಳಿತ ಸಲ್ಲಿಸಿದ ದೂರಿನ ಮೇರೆಗೆ ವಿಶಾಖಪಟ್ಟಣಂನ ವ್ಯಾಪಾರಿ ಎ.ಶಂಕರನಾರಾಯಣ ಎಂಬುವವರ ಮೇಲೆ ಪೊಲೀಸರು ವಂಚನೆ ಮತ್ತು ವಿಶ್ವಾಸಘಾತುಕತನದ ಪ್ರಕರಣ ದಾಖಲಿಸಿದ್ದಾರೆ.
ಹೋಟೆಲ್ ಆಡಳಿತ ನೀಡಿರುವ ದೂರಿನ ಪ್ರಕಾರ ಆರೋಪಿ 102 ದಿನಗಳ ಕಾಲ ಈ ಐಷಾರಾಮಿ ಹೋಟೆಲ್ ನಲ್ಲಿ ತಂಗಿದ್ದರು. ಒಟ್ಟು 25.96 ಲಕ್ಷ ರೂ. ಬಿಲ್ ಪೈಕಿ 13.62 ಲಕ್ಷ ರೂ. ಮಾತ್ರ ಪಾವತಿಸಿ, ಕಳೆದ ಎಪ್ರಿಲ್ನಲ್ಲಿ ಯಾರಿಗೂ ಮಾಹಿತಿ ನೀಡದೇ ಪರಾರಿಯಾಗಿದ್ದಾರೆ.
ಹೋಟೆಲ್ ಸಿಬ್ಬಂದಿ ಆರೋಪಿಯನ್ನು ಸಂಪರ್ಕಿಸಿದಾಗ ಬಾಕಿ ಮೊತ್ತವನ್ನು ಪಾವತಿಸುವುದಾಗಿ ಭರವಸೆ ನೀಡಿದ್ದಾನೆ. ಆದರೆ ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿದ ಹಿನ್ನೆಲೆಯಲ್ಲಿ ಹೋಟೆಲ್ ವ್ಯವಸ್ಥಾಪಕರು ಬಂಜಾರಾ ಹಿಲ್ಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಠಾಣಾಧಿಕಾರಿ ಪಿ.ರವಿ ಹೇಳಿದ್ದಾರೆ.
ಆದರೆ ತಾವು ಹೋಟೆಲ್ ಬಿಡುವ ಮುನ್ನ ಎಲ್ಲ ಬಿಲ್ ಪಾವತಿಸಿದ್ದು, ತಮ್ಮ ಘನತೆಗೆ ಧಕ್ಕೆ ತರುವ ಸಲುವಾಗಿ ಈ ದೂರು ನೀಡಲಾಗಿದೆ. ಹೋಟೆಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ನಾರಾಯಣ ಪ್ರತಿಕ್ರಿಯಿಸಿದ್ದಾರೆ.