ಅನುಮತಿಯಿಲ್ಲದೆ ಕ್ರೈಸ್ತ ಧರ್ಮಗುರು ನಿವಾಸಕ್ಕೆ ದಾಳಿ: ನಾಲ್ವರು ಪೊಲೀಸರ ವಜಾ
ಪಟಿಯಾಳಾ, ಆ.11: ನಾಲ್ಕು ತಿಂಗಳ ಹಿಂದೆ ಯಾವುದೇ ಅನುಮತಿಯಿಲ್ಲದೆ ಜಲಂಧರ್ನಲ್ಲಿ ಕ್ರೈಸ್ತ ಧರ್ಮಗುರು ವೋರ್ವರ ನಿವಾಸದ ಮೇಲೆ ದಾಳಿ ನಡೆಸಿದ್ದ ಮೂವರು ಎಎಸ್ಐಗಳು ಸೇರಿದಂತೆ ನಾಲ್ವರು ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ನಾಲ್ವರೂ ಆರೋಪಿಗಳು ಸದ್ಯ ಪಟಿಯಾ ಸೆಂಟ್ರಲ್ ಜೈಲಿನಲ್ಲಿ ಬಂಧನದಲ್ಲಿದ್ದಾರೆ. ಈ ನಾಲ್ವರು ಈ ವರ್ಷದ ಎಪ್ರಿಲ್ನಲ್ಲಿ ಧರ್ಮಗುರುವಿನ ನಿವಾಸದ ಮೇಲೆ ದಾಳಿ ನಡೆಸಿದ್ದ ಪೊಲೀಸ್ ತಂಡದ ಭಾಗವಾಗಿದ್ದರು. ಇಲಾಖಾ ವಿಚಾರಣೆಗಳ ಬಳಿಕ ಅವರನ್ನು ವಜಾಗೊಳಿಸಲಾಗಿದೆ ಎಂದು ಪಟಿಯಾಲಾದ ಹಿರಿಯ ಪೊಲೀಸ್ ಅಧಿಕಾರಿ ಮಂದೀಪ್ ಸಿಂಗ್ ಸಿಧು ತಿಳಿಸಿದರು.
ಚರ್ಚ್ ಧರ್ಮಗುರು ಸೇರಿದಂತೆ ಆರು ವ್ಯಕ್ತಿಗಳಿಂದ 9.66 ಕೋ.ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಖನ್ನಾ ಪೊಲೀಸರು ಆರಂಭದಲ್ಲಿ ಹೇಳಿದ್ದರು. ಆದರೆ ಈ ಬಗ್ಗೆ ಪೊಲೀಸ್ ಮತ್ತು ಆದಾಯ ತೆರಿಗೆ ಇಲಾಖೆಗೆ ದೂರಿಕೊಂಡಿದ್ದ ಧರ್ಮಗುರುಗಳು ತನ್ನ ನಿವಾಸದಿಂದ ವಶಪಡಿಸಿಕೊಳ್ಳಲಾಗಿರುವ 16.65 ಕೋ.ರೂ.ಗಳನ್ನು ತಕ್ಷಣವೇ ಮರಳಿಸುವಂತೆ ಆಗ್ರಹಿಸಿದ್ದರು. ಇದು ವ್ಯವಹಾರದ ಹಣವಾಗಿತ್ತು ಮತ್ತು ಪೊಲೀಸರು ಅದನ್ನು ಭಾಗಶಃ ದುರುಪಯೋಗಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಈ ಬಗ್ಗೆ ವಿಚಾರಣೆಯನ್ನು ನಡೆಸಿದ್ದ ಪಟಿಯಾಳಾ ಪೊಲೀಸರು ಆರೊಪಿಗಳೀಂದ 4.60 ಕೋ.ರೂ.ಗಳನ್ನು ವಶಪಡಿಸಿಕೊಂಡಿದ್ದರು.