ಪ್ರಾಕೃತಿಕ ವಿಕೋಪ: ಒಡಿಶಾ, ಕರ್ನಾಟಕ, ಹಿಮಾಚಲ ಪ್ರದೇಶಕ್ಕೆ 4,432 ಕೋ.ರೂ ಬಿಡುಗಡೆ
ಹೊಸದಿಲ್ಲಿ, ಆ.20: ಕಳೆದ ವಿತ್ತೀಯ ವರ್ಷದಲ್ಲಿ ಪ್ರಾಕೃತಿಕ ವಿಕೋಪಗಳಿಂದ ವ್ಯಾಪಕ ನಷ್ಟ ಅನುಭವಿಸಿರುವ ಒಡಿಶಾ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶಕ್ಕೆ ಕೇಂದ್ರ ಸರಕಾರ ಒಟ್ಟು 4,432 ಕೋಟಿ ರೂ. ಬಿಡುಗಡೆ ಮಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಫನಿ ಚಂಡಮಾರುತದಿಂದ ಹಾನಿಗೊಳಗಾಗಿರುವ ಒಡಿಶಕ್ಕೆ 3338.22ಕೋಟಿ ರೂ., ನೆರೆಪೀಡಿತ ಕರ್ನಾಟಕಕ್ಕೆ 1029.39ಕೋ.ರೂ. ಹಾಗೂ ಹಿಮಪಾತ ಮತ್ತು ಆಲಿಕಲ್ಲು ಮಳೆಯಿಂದ ಬಾಧಿತ ಹಿಮಾಚಲ ಪ್ರದೇಶಕ್ಕೆ 64.49ಕೋ.ರೂ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ ಎಂದು ಗೃಹ ಸಚಿವಾಲಯದ ಪ್ರಕಟನೆಯಲ್ಲಿ ತಿಳಿಸಿದೆ. ಈ ಮೊತ್ತವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಈ ಮೊತ್ತವು ಈಗಾಗಲೇ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಕೇಂದ್ರ ಸರಕಾರ ರಾಜ್ಯಗಳಿಗೆ ನೀಡುವ ನೆರವಿನ ಹೊರತಾಗಿದೆ. 2018-19ರಲ್ಲಿ ಕೇಂದ್ರ ಸರಕಾರ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಎಲ್ಲ ರಾಜ್ಯಗಳಿಗೆ 9,658ಕೋ.ರೂ. ಮತ್ತು 2019-20ರಲ್ಲಿ ಈವರೆಗೆ 24 ರಾಜ್ಯಗಳಿಗೆ 6,104ಕೋ.ರೂ. ಬಿಡುಗಡೆ ಮಾಡಿದೆ ಎಂದು ಪ್ರಕಟನೆ ತಿಳಿಸಿದೆ.