"ಅಯೋಧ್ಯೆ ವಿವಾದದಲ್ಲಿ ರಾಜಕೀಯ ಸಹಿಸಲಾಗದು"
ಲಕ್ನೋ: ಅಯೋಧ್ಯೆ ವಿವಾದವನ್ನು ಇನ್ನಷ್ಟು ರಾಜಕೀಯಗೊಳಿಸುವುದನ್ನು ಸಹಿಸಲಾಗದು ಎಂದು ಶ್ರೀರಾಮ ಜನ್ಮಭೂಮಿ ನ್ಯಾಸ್ ಅಧ್ಯಕ್ಷ ಮಹಾಂತ ನೃತ್ಯಗೋಪಾಲ ದಾಸ್ ಹೇಳಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ, ರಾಮಮಂದಿರ ನಿರ್ಮಾಣಕ್ಕೆ ಇರುವ ತಡೆ ಏನು ಎಂದು ಅವರು ಪ್ರಶ್ನಿಸಿದ್ದಾರೆ.
"ರಾಮಮಂದಿರ ನಿರ್ಮಾಣ ನಂಬಿಕೆಯ ವಿಚಾರ. ರಾಮನ ಬಗ್ಗೆ ಇರುವ ಕೋಟ್ಯಂತರ ಭಾರತೀಯರ ಭಾವನೆಗಳನ್ನು ಯಾರೂ ಕೊಳ್ಳೆಹೊಡೆಯಲಾಗದು. ರಾಮಮಂದಿರ ನಿರ್ಮಾಣಕ್ಕೆ ಈಗ ಎಲ್ಲ ಅನುಕೂಲಕರ ವಾತಾವರಣ ಇದೆ" ಎಂದು ಸ್ಪಷ್ಟಪಡಿಸಿದ್ದಾರೆ.
"ಸುಪ್ರೀಂಕೋರ್ಟ್ ಕೂಡಾ ಭಾರತೀಯರ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದು, ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದೆ ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಅವಕಾಶ ನೀಡಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಮನ ಹುಟ್ಟಿನ ಬಗ್ಗೆ ಪುರಾವೆ ಇದೆಯೇ ಎಂದು ಸುಪ್ರೀಂಕೋರ್ಟ್ ಕೇಳಿದ ಬಗ್ಗೆ ಪ್ರಶ್ನಿಸಿದಾಗ, ಇದು ಸ್ವೀಕಾರಾರ್ಹವಲ್ಲ; ಹಿಂದೂ ಸಮುದಾಯ ಇದನ್ನು ಖಡಾಖಂಡಿತವಾಗಿ ವಿರೋಧಿಸುತ್ತದೆ ಎಂದು ಉತ್ತರಿಸಿದರು.