ಕಾಶ್ಮೀರಿ ಜನರ ಬಾಯಿ ಮುಚ್ಚಿಸುವುದು ರಾಷ್ಟ್ರವಿರೋಧಿ ಕೃತ್ಯ: ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ, ಆ.25: ಕಾಶ್ಮೀರದಲ್ಲಿ ನಿರ್ಬಂಧಗಳನ್ನು ವಿಧಿಸಿರುವ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಕಣಿವೆ ರಾಜ್ಯದ ಜನರನ್ನು ವೌನವಾಗಿಸಿರುವುದು ರಾಷ್ಟ್ರ ವಿರೋಧಿ ಕೃತ್ಯಕ್ಕೆ ಸಮ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಇತರ ವಿಪಕ್ಷ ನಾಯಕರುಗಳನ್ನು ಶ್ರೀನಗರ ಏರ್ಪೋರ್ಟ್ ನಿಂದ ವಾಪಸ್ ಕಳುಹಿಸಿದ ಮರುದಿನ ಕಾಶ್ಮೀರದ ಕುರಿತು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
ಶ್ರೀನಗರದ ವಿಮಾನದೊಳಗೆ ಕಾಶ್ಮೀರದ ಮಹಿಳೆಯೊಬ್ಬರು ರಾಜ್ಯದಲ್ಲಿ ವಿಧಿಸಲಾಗಿರುವ ನಿರ್ಬಂಧ ಜನರಿಗೆ ಎಷ್ಟೊಂದು ಸಮಸ್ಯೆ ತಂದಿಟ್ಟಿದೆ ಹಾಗೂ ತಮ್ಮ ಮಕ್ಕಳ ಬಗ್ಗೆ ಎಷ್ಟೊಂದು ಅಸುರಕ್ಷಿತೆಯಿದೆ ಎಂಬ ಕುರಿತು ರಾಹುಲ್ ಗಾಂಧಿಗೆ ವಿವರಿಸುತ್ತಿರುವ ವಿಡಿಯೋ ಕ್ಲಿಪ್ ನ್ನು ಪ್ರಿಯಾಂಕಾ ರೀ-ಟ್ವೀಟ್ ಮಾಡಿದ್ದಾರೆ.
‘‘ಇದು ಇನ್ನೆಷ್ಟು ದಿನ ಮುಂದುವರಿಯುತ್ತದೆ?ರಾಷ್ಟ್ರವಾದ ಹೆಸರಲ್ಲಿ ಬಾಯಿ ಮುಚ್ಚಿಸಲ್ಪಟ್ಟ ಹಾಗೂ ಪುಡಿಪುಡಿಯಾಗಿರುವ ಲಕ್ಷಾಂತರ ಜನರ ಪೈಕಿ ಇದು ಒಂದಾಗಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಎಲ್ಲಾ ಪ್ರಜಾಪ್ರಭುತ್ವ ಹಕ್ಕುಗಳನ್ನು ಮುಚ್ಚುವುದಕ್ಕಿಂತ ಹೆಚ್ಚು ‘ರಾಜಕೀಯ’ ಹಾಗೂ ‘ರಾಷ್ಟ್ರವಿರೋಧಿ’ಕೃತ್ಯ ಮತ್ತೊಂದಿಲ್ಲ. ಇದರ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬರ ಕರ್ತವ್ಯ. ನಾವು ಹಾಗೆ ಮಾಡುವುದನ್ನು ನಿಲ್ಲಿಸುವುದಿಲ್ಲ’’ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ