ಕಾಶ್ಮೀರ ಭಾರತದ ಆಂತರಿಕ ವಿಚಾರ, ಯಾರೂ ಹಸ್ತಕ್ಷೇಪ ನಡೆಸುವಂತಿಲ್ಲ: ಪಾಕ್ ಗೆ ರಾಹುಲ್ ತಿರುಗೇಟು
ಹೊಸದಿಲ್ಲಿ, ಆ.28: “ನಾನು ಸರಕಾರದ ಜತೆ ಹಲವು ವಿಚಾರಗಳಲ್ಲಿ ಸಹಮತ ಹೊಂದಿಲ್ಲ. ಆದರೆ ಇದೊಂದು ವಿಚಾರ ಸ್ಪಷ್ಟ ಪಡಿಸುತ್ತೇನೆ, ಕಾಶ್ಮೀರ ಭಾರತದ ಆಂತರಿಕ ವಿಚಾರ ಹಾಗೂ ಪಾಕಿಸ್ತಾನ ಸಹಿತ ಯಾವುದೇ ಇತರ ದೇಶಕ್ಕೆ ಈ ವಿಚಾರದಲ್ಲಿ ಹಸ್ತಕ್ಷೇಪಕ್ಕೆ ಆಸ್ಪದವಿಲ್ಲ'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಶ್ಮೀರದಲ್ಲಿ ಹಿಂಸಾಚಾರವನ್ನು ಪಾಕಿಸ್ತಾನ ಪ್ರಚೋದಿಸುತ್ತಿದೆ ಎಂದೂ ರಾಹುಲ್ ಆರೋಪಿಸಿ ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ. ``ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸೆಯಿದೆ. ಉಗ್ರವಾದವನ್ನು ಪೋಷಿಸುತ್ತಿದೆ ಎಂದು ಜಗತ್ತಿನೆಲ್ಲೆಡೆ ತಿಳಿಯಲಾಗಿರುವ ಪಾಕಿಸ್ತಾನ ಅಲ್ಲಿ ಹಿಂಸಾಚಾರ ಪ್ರೇರೇಪಿಸುತ್ತಿದೆ,'' ಎಂದೂ ರಾಹುಲ್ ಹೇಳಿದ್ದಾರೆ.
ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವೆ ಶಿರೀನ್ ಮಝಾರಿ ತಾವು ವಿಶ್ವ ಸಂಸ್ಥೆಗೆ ಕಾಶ್ಮೀರ ವಿಚಾರದ ಕುರಿತಂತೆ ಪತ್ರ ಬರೆದಿರುವುದಾಗಿ ಹಾಗೂ ಅಲ್ಲಿ ಜನರು ಸಾಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿರುವುದನ್ನೂ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ ನಂತರ ರಾಹುಲ್ ಅವರ ಮೇಲಿನ ಹೇಳಿಕೆ ಬಂದಿದೆ.