ಇಡೀ ದೇಶವನ್ನು ಅಕ್ರಮ ವಲಸಿಗರಿಂದ ಮುಕ್ತಗೊಳಿಸಲು ನಮ್ಮಲ್ಲಿ ಯೋಜನೆ ಸಿದ್ಧವಿದೆ: ಅಮಿತ್ ಶಾ
ಗುವಾಹಟಿ, ಸೆ.9: “ಅಸ್ಸಾಂ ಮಾತ್ರವಲ್ಲ ಇಡೀ ದೇಶವನ್ನು ಅಕ್ರಮ ವಲಸಿಗರಿಂದ ಮುಕ್ತಗೊಳಿಸಬೇಕಿದೆ. ನಮ್ಮಲ್ಲಿ ಈಗಾಗಲೇ ಯೋಜನೆ ಸಿದ್ಧವಿದೆ, ಎಲ್ಲಾ ರಾಜ್ಯಗಳನ್ನು ವಿಶ್ವಾಸಕ್ಕೆ ಪಡೆಯಲಾಗುವುದು'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೇಶದಿಂದ ಪ್ರತಿಯೊಬ್ಬ ಅಕ್ರಮ ವಲಸಿಗನನ್ನು ಕೇಂದ್ರ ಹೊರಕ್ಕೆಸೆಯಲಿದೆ ಎಂದು ನಿನ್ನೆಯಷ್ಟೇ ಶಾ ಹೇಳಿದ್ದರು. ಈಗಾಗಲೇ 19 ಲಕ್ಷ ಮಂದಿಯ ಹೆಸರುಗಳನ್ನು ಕೈಬಿಟ್ಟಿರುವ ಅಸ್ಸಾಂನ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ನ ಅಂತಿಮ ಪಟ್ಟಿ ವಿವಾದಕ್ಕೀಡಾಗಿರುವಂತೆಯೇ ಸಚಿವರ ಈ ಹೇಳಿಕೆ ಬಂದಿದೆ.
“ಎಲ್ಲಾ ರಾಜ್ಯಗಳು ಎನ್ಆರ್ ಸಿ ಬಗ್ಗೆ ಚಿಂತಿತವಾಗಿವೆ'' ಎಂದು ತಮ್ಮ ಎರಡು ದಿನಗಳ ಈಶಾನ್ಯ ರಾಜ್ಯಗಳ ಪ್ರವಾಸದ ವೇಳೆ ಶಾ ಹೇಳಿದ್ದರು. “ಎನ್ಆರ್ ಸಿ ತಪ್ಪು ಎಂದು ಅಸ್ಸಾಂ ಅಭಿಪ್ರಾಯ ಪಡುತ್ತಿದೆ, ಅಸ್ಸಾಂ ಮಾತ್ರವಲ್ಲ ಇಡೀ ದೇಶವನ್ನು ಅಕ್ರಮ ವಲಸಿಗರಿಂದ ಮುಕ್ತಗೊಳಿಸಬೇಕಿದೆ. ಹಲವರಿಗೆ ಎನ್ಆರ್ ಸಿ ಒಂದು ಸಮಸ್ಯೆಯಾಗಿದೆ. ಹಲವು ಜನರನ್ನು ಎನ್ಆರ್ ಸಿಯಿಂದ ಕೈ ಬಿಡಲಾಗಿದೆ ಎಂದು ಜನರು ಅಂದುಕೊಂಡಿದ್ದಾರೆ. ಯಾವುದೇ ಅಕ್ರಮ ವಲಸಿಗರು ಅಸ್ಸಾಂನಲ್ಲಿರಲು ಸಾಧ್ಯವಿಲ್ಲ ಹಾಗೂ ಇನ್ನೊಂದು ರಾಜ್ಯಕ್ಕೆ ಹೋಗಲು ಸಾಧ್ಯವಿಲ್ಲ'' ಎಂದು ಶಾ ಹೇಳಿದರು.