ಎನ್ಸಿಪಿ ಸಂಸದ ಉದಯನ್ರಾಜೆ ಭೋಸಲೆ ಬಿಜೆಪಿಗೆ ಸೇರ್ಪಡೆ
ಮಹಾರಾಷ್ಟ್ರದಲ್ಲಿ ಮುಂದುವರಿದ ಪಕ್ಷಾಂತರ ಪರ್ವ
ದೇವೇಂದ್ರ ಫಡ್ನವಿಸ್,ಉದಯನ್ರಾಜೆ ಭೋಸಲೆ
ಹೊಸದಿಲ್ಲಿ, ಸೆ.14: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ(ಎನ್ಸಿಪಿ)ಹಿರಿಯ ನಾಯಕ, ಸತಾರದ ಹಾಲಿ ಸಂಸದ ಉದಯನ್ರಾಜೆ ಭೋಸಲೆ ಶನಿವಾರ ಲೋಕಸಭಾ ಸಂಸತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಹಿತ ಉನ್ನತ ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಉದಯನ್ರಾಜೆ ಅವರು ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷ ತೊರೆದು ಬಿಜೆಪಿ ಸೇರುತ್ತಿರುವ ಇನ್ನೋರ್ವ ಪ್ರಮುಖ ನಾಯಕನಾಗಿದ್ದಾರೆ. ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಮಹಾರಾಷ್ಟ್ರದಲ್ಲಿ ಎನ್ಸಿಪಿ, ಕಾಂಗ್ರೆಸ್ ನಾಯಕರು ಬಿಜೆಪಿ, ಶಿವಸೇನೆಗೆ ಪಕ್ಷಾಂತರವಾಗುವುದು ಜೋರಾಗಿ ನಡೆಯುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಹಾಗೂ ನಾಯಕತ್ವದಿಂದ ಪ್ರಭಾವಿತನಾಗಿ ಬಿಜೆಪಿ ಸೇರುತ್ತಿದ್ದೇನೆ. ದೇಶವನ್ನು ಶಕ್ತಿಶಾಲಿಗೊಳಿಸಲು ಶಿವಾಜಿ ಮಹಾರಾಜರ ಹಾದಿಯನ್ನು ತುಳಿಯುತ್ತಿರುವ ಬಿಜೆಪಿಯ ಕುರಿತು ನನಗೆ ತುಂಬಾ ಹೆಮ್ಮೆಯಿದೆ ಎಂದು ಛತ್ರಪತಿ ಶಿವಾಜಿ ಮಹಾರಾಜ್ರ ವಂಶಸ್ಥರಾದ ಉದಯನ್ರಾಜೆೆ ಹೇಳಿದ್ದಾರೆ.
ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಸತಾರ ಕ್ಷೇತ್ರದಿಂದ ಎನ್ಸಿಪಿ ಟಿಕೆಟ್ನಿಂದ ಸ್ಪರ್ಧಿಸಿದ್ದ ಉದಯನ್ರಾಜೆ 1,30,000ಕ್ಕೂ ಅಧಿಕ ಮತಗಳ ಅಂತರದಿಂದ ಜಯಶಾಲಿಯಾಗಿದ್ದರು.
ಬೆಳಗ್ಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾರನ್ನು ಭೇಟಿಯಾದ ಉದಯನ್ರಾಜೆ ಭೋಸಲೆ ಸತಾರಾ ಲೋಕಸಭಾ ಕ್ಷೇತ್ರದ ಸಂಸತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಆ ಬಳಿಕ ಅಮಿತ್ ಶಾ ನಿವಾಸಕ್ಕೆ ಆಗಮಿಸಿ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು.