ಯೂಸುಫ್ ತಾರಿಗಾಮಿ ಕಾಶ್ಮೀರಕ್ಕೆ ಮರಳಲು ಮುಕ್ತಾವಕಾಶ : ಸುಪ್ರೀಂ ಆದೇಶ
ಹೊಸದಿಲ್ಲಿ, ಸೆ.16: ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಲು ಸಿಪಿಐ(ಎಂ) ಮುಖಂಡ ಮುಹಮ್ಮದ್ ಯೂಸುಫ್ ತಾರಿಗಾಮಿಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ತಾರಿಗಾಮಿಯವರನ್ನು ಸೆ.9ರಂದು ಚಿಕಿತ್ಸೆಗಾಗಿ ಹೊಸದಿಲ್ಲಿಯ ಎಐಐಎಂಎಸ್ಗೆ ದಾಖಲಿಸಲಾಗಿತ್ತು.
ವೈದ್ಯರು ಸೂಚಿಸಿದರೆ ತಮ್ಮ ಮನೆಗೆ ಮರಳಲು ತಾರಿಗಾಮಿ ಯಾರ ಅನುಮತಿಗೂ ಕಾಯಬೇಕಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ತಿಳಿಸಿದೆ.
ದಿಲ್ಲಿಗೆ ಸ್ಥಳಾಂತರಿಸಿದ ಬಳಿಕ ತಾರಿಗಾಮಿಯವರ ವಾಹನವನ್ನೂ ಸರಕಾರ ತೆಗೆದುಕೊಂಡು ಹೋಗಿದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಅವರೀಗ ದಿಲ್ಲಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರ ಅತಿಥಿಗೃಹದಲ್ಲಿದ್ದಾರೆ. ಅಲ್ಲಿಂದ ಹೊರಗೆ ಹೋಗಲೂ ಬಿಡುತ್ತಿಲ್ಲ ಎಂದು ತಾರಿಗಾಮಿಯವರ ವಕೀಲ ಆರ್ ರಾಮಚಂದ್ರನ್ ನ್ಯಾಯಪೀಠಕ್ಕೆ ತಿಳಿಸಿದರು.
ಅವರ ಪ್ರಯಾಣಕ್ಕೆ ಯಾವುದಾದರೂ ನಿರ್ಬಂಧವಿದ್ದರೆ ಅವರು ಕಾಶ್ಮೀರ ಹೈಕೋರ್ಟ್ ಮೆಟ್ಟಲೇರಬಹುದು ಎಂದು ನ್ಯಾಯಪೀಠ ತಿಳಿಸಿದೆ.
Next Story